ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪಗೊಂಡ ಮಹಾತ್ಮನ ಪ್ರತಿಮೆ

Last Updated 3 ಅಕ್ಟೋಬರ್ 2017, 9:35 IST
ಅಕ್ಷರ ಗಾತ್ರ

ಕೆಜಿಎಫ್: ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಸ್ಥಾಪಿಸಲಾಗಿದ್ದ ನಗರದ ಗುರುಭವನದ ಆವರಣದಲ್ಲಿ ಸ್ಥಾಪಿಸಲ್ಪಟ್ಟಿದ್ದ ಮಹಾತ್ಮಗಾಂಧಿಯ ವಿರೂಪ ಪ್ರತಿಮೆ ಸೋಮವಾರ ಅನಾವರಣಗೊಂಡಿತು.

ಸುಮಾರು ನಾಲ್ಕು ದಶಕಗಳ ಹಿಂದೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಆಗಿನ ಡಿಸಿಎಂ ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದರು. ನಂತರ ಶಾಲೆ ಮುಚ್ಚಿ ಪ್ರದೇಶವನ್ನು ಗುರುಭವನ ನಿರ್ಮಾಣಕ್ಕೆಂದು ಶಿಕ್ಷಣ ಇಲಾಖೆಗೆ ನೀಡಲಾಯಿತು.

ಗುರುಭವನ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮವಾಗಿ ಕಟ್ಟಡದ ಭಾಗವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತು. ಅದರ ಮುಂದೆ ಇದ್ದ ಗಾಂಧಿ ಪ್ರತಿಮೆ ಸಹ ಕಿಡಿಗೇಡಿಗಳ ಸಾಹಸಕ್ಕೆ ಸಿಲುಕಿ ವಿರೂಪಗೊಂಡಿತು.

ವಾರ್ಡಿನ ನಗರಸಭೆ ಸದಸ್ಯೆ ದೀಪಾರಾಂಖ, ಸಮಾಜ ಸೇವಕ ನವೀನ್‌ಜೈನ್‌ ಈ ಸಂಬಂಧವಾಗಿ ನಗರಸಭೆಗೆ ಮನವಿ ನೀಡಿ, ವಿರೂಪಗೊಂಡ ಪ್ರತಿಮೆಯನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದರು. ಈಚೆಗೆ ಕಟ್ಟಡದ ಬಳಿಗೆ ಬಂದಿದ್ದ ಜಿಲ್ಲಾಧಿಕಾರಿ ಡಾ.ತ್ರಿಲೋಕಚಂದ್ರರವರಿಗೆ ಸಹ ಮನವಿ ನೀಡಿ, ವಿರೂಪಗೊಂಡ ಗಾಂಧಿ ಪ್ರತಿಮೆಯನ್ನು ಕೂಡಲೇ ತೆಗೆಯಬೇಕು. ಬೇರೆ ಪುತ್ಥಳಿ ಇಟ್ಟು ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಆದರೆ ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮಕೈಗೊಳ್ಳಲಿಲ್ಲ. ಸಮಾಜ ಸೇವಕ ನವೀನ್‌ ಜೈನ್ ದೊಡ್ಡ ಬಟ್ಟೆಯನ್ನು ಸುತ್ತಿ ವಿರೂಪವನ್ನು ಮುಚ್ಚಿಟ್ಟರು. ನಂತರ ನಗರಸಭೆ ಅಧಿವೇಶನದಲ್ಲಿ ಸದಸ್ಯೆ ದೀಪಾರಾಂಖ ಈ ವಿಷಯವನ್ನು ಪ್ರಸ್ಥಾಪಿಸಿ ರಾಷ್ಟ್ರಪಿತನಿಗೆ ಅಗೌರವ ನಡೆಯುವ ಕೆಲಸ ಆಗುತ್ತಿದೆ. ಕೂಡಲೇ ಪುತ್ಥಳಿಯನ್ನು
ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಕೋರಿದ್ದರು.

ಈ ನಡುವೆ ಗಾಂಧಿ ಪುತ್ಥಳಿಗೆ ಹೊದಿಸಿದ್ದ ಬಟ್ಟೆಯನ್ನು ಸಹ ಕಿಡಿಗೇಡಿಗಳು ಕಿತ್ತುಹಾಕಿ, ಗಾಂಧಿ ಜಯಂತಿಯಂದು ಮಹಾತ್ಮನ ವಿರೂಪ ಪ್ರತಿಮೆ ಕಾಣುವಂತೆ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಸೋಮವಾರ ಪುನಾ ಮಹಾತ್ಮಗಾಂಧಿಗೆ ದೊಡ್ಡ ಪ್ಲಾಸ್ಟಿಕ್‌ ಕವರ್‌ ಹಾಕಿ, ವಿರೂಪವನ್ನು ಮುಚ್ಚಿಹಾಕಿದರು.

***
ರಾಬರ್ಟಸನ್‌ಪೇಟೆ ನಗರಸಭೆ ಮಹಾತ್ಮಗಾಂಧಿಗೆ ಅಗೌರವ ತೋರುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ
ದೀಪಾರಾಂಖ, ನಗರಸಭೆ ಸದಸ್ಯೆ

***
ಗಾಂಧಿ ಪ್ರತಿಮೆಯನ್ನು ತೆಗೆಯುವಂತೆ ನಗರಸಭೆಗೆ ಮತ್ತೊಮ್ಮೆ ಪತ್ರ ಬರೆಯಲಾಗುವುದು
ಶಂಕರ್‌ ಕಾವಲಿ, ಕ್ಷೇತ್ರ ಶಿಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT