ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳನ್ನು ಬಿಡಿ ಎನ್ನುವುದು ಸರಿಯಲ್ಲ: ಶ್ರೀಶೈಲ ಶ್ರೀ

Last Updated 3 ಅಕ್ಟೋಬರ್ 2017, 10:11 IST
ಅಕ್ಷರ ಗಾತ್ರ

ರಾಯಚೂರು: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬೆಂಬಲಿಸಿ ಇಲ್ಲವೆ ಮಠಗಳನ್ನು ಬಿಡಿ ಎನ್ನುವ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಅವರ ಸ್ಥಾನಕ್ಕೆ ತಕ್ಕುದ್ದಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಡ್ಯಾಡಿ ಕಾಲೋನಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಬಂದಿದ್ದಾಗ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

‘ಇದನ್ನು ಮಠದ ಭಕ್ತರು, ಜನರು ನಿರ್ಧಾರ ಮಾಡುತ್ತಾರೆಯೇ ಹೊರತು ಎಂ.ಬಿ.ಪಾಟೀಲರಲ್ಲ. ಸಚಿವರೇ ಮುಂದೆ ನಿಂತು ಹೋರಾಟ ಮಾಡುತ್ತಿರುವುದು ಮತ್ತು ಚುನಾವಣೆ ಮುಂಚೆ ನಿರ್ಧಾರ ತಿಳಿಸಿ ಎನ್ನುತ್ತಿರುವುದನ್ನು ನೋಡಿದರೆ ಇದು ರಾಜಕೀಯ ಪ್ರೇರಿತ ಎನ್ನುವುದು ಗೊತ್ತಾಗುತ್ತದೆ’ ಎಂದು ತಿಳಿಸಿದರು.

ಲಿಂಗಾಯತ ಧರ್ಮದ ವಾದದಲ್ಲಿ ಹುರುಳಿಲ್ಲ. 40ಕ್ಕೂ ಹೆಚ್ಚು ಶರಣರು 200ಕ್ಕೂ ಹೆಚ್ಚು ವಚನಗಳಲ್ಲಿ ವೀರಶೈವ ಪದ ಉಲ್ಲೇಖಿಸಿದ್ದಾರೆ. ಆದರೆ, ಕೇವಲ ಎಂಟು ಶರಣರು 13 ವಚನಗಳಲ್ಲಿ ಲಿಂಗಾಯತ ಪದ ಬಳಸಿದ್ದಾರೆ. ಆದರೆ, ಬಸವಣ್ಣನವರ ಯಾವುದೇ ವಚನದಲ್ಲೂ ಲಿಂಗಾಯತ ಪದವಿಲ್ಲ. ಲಿಂಗಾಯತ ಎನ್ನುವ ಪದ ವೀರಶೈವದ ಅನ್ವರ್ಥವಾಗಿದೆ ಎಂದು ಹೇಳಿದರು.

ಸಮನ್ವಯ ಸಮಿತಿ ನಿರ್ಣಯ ಹೇಳುವವರೆಗೂ ಯಾವುದೇ ಹೇಳಿಕೆ ನೀಡಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ಸಭೆ, ಸಮಾವೇಶಗಳಲ್ಲಿ ಈಗ ಬಹಿರಂಗ ಹೇಳಿಕೆ ನೀಡಲಾಗುತ್ತಿದೆ. ಹೀಗಾಗಿ ಸಮಿತಿ ರಚನೆಯಾಗುವುದೇ ಎಂಬ ಸಂಶಯ ಮೂಡಿದೆ. ಮೌಢ್ಯ ನಿಷೇಧ ಕಾಯ್ದೆಯಲ್ಲಿ ವಿವಾದಾತ್ಮಕ ವಿಷಯಗಳನ್ನು ಕೈಬಿಡಲಾಗಿದೆ. ಆದರೆ ಪೂರ್ಣ ಕರಡು ನೋಡಿದ ನಂತರ ವಾಸ್ತವ ತಿಳಿಯಲಿದೆ ಎಂದರು.

ಸೋಮವಾರಪೇಟೆ ಮಠದ ರಾಚೋಟಿವೀರ ಶಿವಾಚಾರ್ಯರು, ನಿಲೋಗಲ್ ಬೃಹನ್ಮಠದ ಪಂಕ್ಷಾಕ್ಷರಿ ಶಿವಾಚಾರ್ಯರು, ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT