ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ

ಜಿಲ್ಲಾಡಳಿತ, ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಒಂದೆಡೆ ಖುಷಿ, ಮತ್ತೊಂದೆಡೆ ಬೇಸರ. ಲಾರಿಗಳನ್ನು ಕಂಡೊಡನೆ ಕಾಡಿಗೆ ತೆರಳುವ ವಿಚಾರ ಆನೆಗಳಿಗೂ ಖಚಿತವಾದಂತಿತ್ತು. ಮಾವುತರು ಹಾಗೂ ಕಾವಾಡಿಗರೂ ಖುಷಿಯಲ್ಲಿದ್ದರು. ಆದರೆ, ಪ್ರವಾಸಿಗರು ಮಾತ್ರ ಬೇಸರದಲ್ಲಿದ್ದರು.

ಜಂಬೂಸವಾರಿಯ ರೂವಾರಿಗಳಾದ ಗಜಪಡೆಗೆ ಬೀಳ್ಕೊಡಲು ಜಿಲ್ಲಾಡಳಿತ, ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.

ಅರಮನೆ ವೀಕ್ಷಿಸಲು ಬಂದಿದ್ದ ಮಕ್ಕಳು, ಯುವಕ–ಯುವತಿಯರು ಆನೆಗಳಿಗೆ ಹಣ್ಣು, ಇತರ ಆಹಾರ ಪದಾರ್ಥಗಳನ್ನು ತಿನ್ನಿಸಿ ಸಂಭ್ರಮಿಸಿದರು. ಕೆಲ ಮಕ್ಕಳು ಆನೆ ಮೇಲೆ ಮಾವುತರ ಜೊತೆ ಕುಳಿತರು.

ದಸರಾ ಮೆರವಣಿಗೆಗಾಗಿ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳು ಅರಣ್ಯ ಇಲಾಖೆ ಅಧಿಕಾರಿಗಳ ಬೆಂಗಾವಲಿನಲ್ಲಿ ತಮ್ಮ ಶಿಬಿರಗಳಿಗೆ ತೆರಳಿದವು.

ಬೀಳ್ಕೊಡುಗೆಗೂ ಮುನ್ನ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರಿಗೆ ಉಪಾಹಾರ ಕೂಟ ಆಯೋಜಿಸಲಾಗಿತ್ತು.

ಶಾಸಕ ಎಂ.ಕೆ.ಸೋಮಶೇಖರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರು ಅರಮನೆ ಮಂಡಳಿ ವತಿಯಿಂದ ಮಾವುತ ಹಾಗೂ ಕಾವಾಡಿಗರಿಗೆ ಗೌರವಧನ ವಿತರಿಸಿದರು.

ಅರ್ಜುನ ಆನೆ ತಾನಾಗಿಯೇ ಲಾರಿ ಮೇಲೇರಿತು. ಬಹುತೇಕ ಆನೆಗಳನ್ನು ಲಾರಿಗೆ ಹತ್ತಿಸಲು ನೆರವಾಗಿದ್ದು ಅಭಿಮನ್ಯು. ಮಾವುತ ಹಾಗೂ ಕಾವಾಡಿಗಳ ಕುಟುಂಬದವರು ಗಂಟುಮೂಟೆ ಕಟ್ಟಿಕೊಂಡು ಶಿಬಿರದತ್ತ ಪ್ರಯಾಣ ಬೆಳೆಸಿದರು. ಪಕ್ಕದಲ್ಲೇ ನಿಂತಿದ್ದ ಅರಮನೆಯ ಆರು ಹೆಣ್ಣಾನೆಗಳು ದುಃಖದಲ್ಲಿ ಘೀಳಿಟ್ಟವು. ಅರ್ಜುನ ಆನೆಯು ಈಶ್ವರ ದೇಗುಲದ ಮುಂದೆ ಸೊಂಡಿಲೆತ್ತಿ ನಮಸ್ಕರಿಸಿತು.

ಅಭಿಮನ್ಯು ಆನೆ ಮಾತ್ರ ತಡವಾಗಿ ಪ್ರಯಾಣ ಬೆಳೆಸಿತು. ಮಾವುತ ವಸಂತ್‌ ಸಾರಥ್ಯದ ಈ ಆನೆಯು ಮೃಗಾಲಯದ ಒಂದು ಆನೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲು ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT