ಬಾದಾಮಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇದೇ 6ರಂದು ಭೇಟಿ ನೀಡಲಿದ್ದು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡ ಸಿದ್ದಣ್ಣ ಶಿವನಗುತ್ತಿ ಹೇಳಿದರು.
ನಗರದಲ್ಲಿ ಮಂಗಳವಾರತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಂದು ಸಂಜೆ 6 ಗಂಟೆಗೆ ಬರಲಿರುವ ಮಮದಾಪುರ ಮಮದಾಪುರ ಅವರ 51 ನೇ ಹುಟ್ಟುಹಬ್ಬ ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಇಲ್ಲಿನ ಮಮದಾಪುರ ಕಲ್ಯಾಣ ಮಂಟಪದ ಆವರಣದಲ್ಲಿ ಮಹಾಂತೇಶ ಅವರ ಅಭಿಮಾನಿ ಬಳಗವು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದೆ. ಅಂದು ಬೆಳಿಗ್ಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸೆ, ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶಿವು ಗಂಗಾಲ ಹೇಳಿದರು.
ಸಮಾರಂಭದಲ್ಲಿ ಕಮತಗಿ ಹೋಳೆಹುಚ್ಚೇಶ್ವರ ಶ್ರೀಗಳು, ಡಾ. ಶಿವಕುಮಾರ ಶ್ರೀಗಳು, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಜಿಲ್ಲೆಯ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.