ಅಹಮದಾಬಾದ್: ದಲಿತ ಯುವಕ ಮೀಸೆ ಬಿಟ್ಟಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಕಳೆದೊಂದು ವಾರದಲ್ಲಿ ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ.
ಇಲ್ಲಿನ ಲಂಬೋದ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ದಲಿತ ಯುವಕ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಇಬ್ಬರು ಮೇಲ್ಜಾತಿ ಯುವಕರು ದಾರಿಯಲ್ಲಿ ಅಡ್ಡಗಟ್ಟಿ ಥಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತರ ಮೇಲಿನ ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ನಾಯಕ ಜಿಗ್ನೇಶ್ ಮೇವಾನಿ, ’ರಾಜ್ಯದ ಗೃಹ ಸಚಿವರು ರಾಜೀನಾಮೆ ನೀಡದೇ ಇದ್ದರೆ ದಲಿತರ ಆಕ್ರೋಶ ಗುಜರಾತ್ ಅನ್ನು ಭಸ್ಮ ಮಾಡಲಿದೆ’ ಎಂದು ಬೆದರಿಕೆ ಹಾಕಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮೇವಾನಿ, ಗುಜರಾತ್ನಲ್ಲಿ ದಲಿತರು ವಾಸ ಮಾಡುವುದೇ ಕಷ್ಟವಾಗಿದೆ’ ಎಂದು ಹೇಳಿದ್ದಾರೆ.