ತಮ್ಮ ಅಪಖ್ಯಾನಗಳಿಗೆ ಯಾವುದು ನಿಲುಕುವುದಿಲ್ಲವೋ, ತಮ್ಮ ಸೀಮಿತ ದೃಷ್ಟಿಗೆ ಯಾವುದು ಗೋಚರಿಸುವುದಿಲ್ಲವೋ ಅಂತಹುದು ಅಸ್ತಿತ್ವದಲ್ಲೇ ಇಲ್ಲ ಎಂದು ಢಾಣಾಢಂಗುರ ಹೊಡೆಯುವುದು ಮೂರ್ಖತನ. ಋಷಿ, ಮುನಿಗಳು, ದೃಷ್ಟಾರರ ಚಿಂತನೆಗಳ ತಳಹದಿ ಹೊಂದಿ, ಪುರಾಣ, ಪುಣ್ಯಗ್ರಂಥಗಳಿಂದ ಪುಷ್ಟಿಗೊಂಡು, ಸಾವಿರಾರು ದೇವಾಲಯಗಳು, ಹತ್ತಾರು ಹಬ್ಬಹರಿದಿನಗಳು, ಪಂಥಗಳು, ಹರಿದಾಸರು, ಕವಿಗಳು, ಜೋಗಿಗಳು, ಸಾಧುಸಂತರು, ಭಕ್ತಿಗೀತೆಗಳು, ದೇವತಾರಾಧನೆಗಳು, ಬದುಕಿನ ವಿವಿಧ ಹಂತಗಳ ಸಂಸ್ಕಾರಗಳು ಮುಂತಾದ ಇಟ್ಟಿಗೆಗಳಿಂದ ನಿರ್ಮಾಣಗೊಂಡಿರುವ ದೊಡ್ಡ ಇಮಾರತು ಹಿಂದೂ ಧರ್ಮ. ಅದು ಯಾವ ವ್ಯಾಖ್ಯಾನದ ವ್ಯಾಪ್ತಿಗೂ ಬರಬೇಕಿಲ್ಲ.