ಬೆಂಗಳೂರು: ಜುಲೈ ತಿಂಗಳ ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನ ಹತ್ತಿರವಾಗುತ್ತಿದ್ದು, ಈವರೆಗೂ ರಿಟರ್ನ್ ಸಲ್ಲಿಸದ ವ್ಯಾಪಾರಿಗಳಿಗೆ ತಕ್ಷಣವೇ ಎಸ್ಎಂಎಸ್ ಸಂದೇಶ ಕಳುಹಿಸಲು ಜಿಎಸ್ಟಿ ಸಚಿವರ ತಂಡದ ಮುಖ್ಯಸ್ಥ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜಿಎಸ್ಟಿ–ಎನ್ ಮತ್ತು ಇನ್ಫೊಸಿಸ್ಗೆ ಸೂಚಿಸಿದ್ದಾರೆ.
ಜಿಎಸ್ಟಿ ಜಾಲತಾಣದಲ್ಲಿರುವತಾಂತ್ರಿಕ ಸಮಸ್ಯೆಗಳ ಕುರಿತು ಬುಧವಾರ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಚಿವರ ತಂಡದ ಎರಡನೇ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಸುಮಾರು 20 ಲಕ್ಷ ವ್ಯಾಪಾರಿಗಳು ಇನ್ನೂ ಆನ್ಲೈನ್ ಮೂಲಕ ರಿಟರ್ನ್ ಸಲ್ಲಿಸಿಲ್ಲ. ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಸುವ ಧಾವಂತ ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಎಸ್ಟಿ– ನೆಟ್ವರ್ಕ್ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಜಿಎಸ್ಟಿಆರ್–1 ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 10, ಜಿಎಸ್ಟಿಆರ್–2 ಸಲ್ಲಿಸಲು ಕೊನೆ ದಿನ ಅಕ್ಟೋಬರ್ 31.
‘ವ್ಯಾಪಾರಿಗಳು ಸಮಗ್ರ ಲೆಕ್ಕಪತ್ರ ಮಾಹಿತಿ ಸಲ್ಲಿಕೆಗೆ (ಜಿಎಸ್ಟಿಆರ್–3ಬಿ) ಆಗಸ್ಟ್ 20 ಕೊನೆಯ ದಿನವಾಗಿತ್ತು. ಆವರೆಗೆ ಒಟ್ಟು 15.68 ಲಕ್ಷ ಜನ ಮಾಹಿತಿ ಸಲ್ಲಿಸಿದ್ದರು. ಆಗಸ್ಟ್ 21ರಂದು 13 ಲಕ್ಷ ಜನ ಮಾಹಿತಿ ನೀಡಿದರು. ಒಟ್ಟು 28.68 ಲಕ್ಷ ಸಮಗ್ರ ಲೆಕ್ಕಪತ್ರ ಮಾಹಿತಿ ಸಲ್ಲಿಕೆಯಾಯಿತು.
‘ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯ ರಿಟರ್ನ್ ಸಲ್ಲಿಕೆಗೆ ಪೂರಕವಾಗಿ ಸಾಫ್ಟ್ವೇರ್ ಅಭಿವೃದ್ಧಿ
ಪಡಿಸಲಾಗಿದೆ. ವ್ಯಾಪಾರಿಗಳೂ ಸಾಫ್ಟ್ವೇರ್ನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಸುಶೀಲ್ ಮೋದಿ ತಿಳಿಸಿದರು.
‘ಸಾಫ್ಟ್ವೇರ್ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್ ಸಂಸ್ಥೆಯ ತಜ್ಞರ ಜತೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಗಂಟೆ ಅವಧಿಯಲ್ಲಿ 1.30 ಲಕ್ಷ ರಿಟರ್ನ್ ಸಲ್ಲಿಕೆ ಮಾಡಬಹುದಾದ ವೇಗಕ್ಕೆ ಸಾಫ್ಟ್ವೇರ್ ಮೇಲ್ದರ್ಜೆಗೇರಿಸಲಾಗು
ವುದು. ಈಗ ಗಂಟೆಗೆ 80 ಸಾವಿರ ಮಾಡಬಹುದಾಗಿದೆ’ ಎಂದರು.
ತಾಂತ್ರಿಕ ಸಮಸ್ಯೆ ನಿವಾರಣೆ
‘ಜಿಎಸ್ಟಿ ಜಾಲತಾಣದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳು ಬಹುತೇಕ ನಿವಾರಣೆ ಆಗಿವೆ’ ಎಂದು ಮೋದಿ ತಿಳಿಸಿದರು.
‘ವಿವಿಧ ರಾಜ್ಯಗಳಲ್ಲಿ ಹಿಂದಿನ ತೆರಿಗೆ ಪದ್ಧತಿಯಿಂದ ಜಿಎಸ್ಟಿಗೆ ವರ್ಗಾವಣೆಗೊಳ್ಳಲು ಸಮಸ್ಯೆಗಳು ಆಗುತ್ತಿವೆ. ಇದನ್ನು ಸರಿಪಡಿಸಿ, ಮಾರ್ಗದರ್ಶನ ನೀಡಲು ಪ್ರತಿ ರಾಜ್ಯಕ್ಕೂ ತಜ್ಞರ ತಂಡ ಕಳುಹಿಸಲು ಸೂಚಿಸಲಾಗಿದೆ’ ಎಂದರು.
‘ಶುಕ್ರವಾರ ದೆಹಲಿಯಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ರಫ್ತುದಾರರಿಗೆ ಹೆಚ್ಚುವರಿ ತೆರಿಗೆ ಮರುಪಾವತಿ ಮತ್ತು ಸಣ್ಣ ವ್ಯಾಪಾರಿಗಳ ತೆರಿಗೆ ವಿವರ ನೀಡುವ ವಿಧಾನವನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಚರ್ಚೆ ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.