ಬೆಂಗಳೂರು: ‘ನಗರದಲ್ಲಿ ಕಸ ವಿಲೇವಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಡುತ್ತಿದ್ದ ವೆಚ್ಚದ ಪ್ರಮಾಣದಲ್ಲಿ
₹ 681 ಕೋಟಿ ದಿಢೀರ್ ಹೆಚ್ಚಳವಾಗಿದ್ದು, ಇದರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿ ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್. ರಮೇಶ್ ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ) ದೂರು ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬಿಬಿಎಂಪಿ ಆಯುಕ್ತ ಮಂಜು
ನಾಥ ಪ್ರಸಾದ್, ಜಂಟಿ ಆಯುಕ್ತ (ಆರೋಗ್ಯ) ಸರ್ಫರಾಜ್ ಖಾನ್ ಅವರ ವಿರುದ್ಧ ಸೆ.24ರಂದು ದೂರು ನೀಡಿದ್ದರು. ಮಂಗಳವಾರ ದೂರನ್ನು ಇ.ಡಿ ಸ್ವೀಕಾರ ಮಾಡಿದೆ.
‘2016ರ ಫೆಬ್ರುವರಿವರೆಗೆ ಕಸ ವಿಲೇವಾರಿಗಾಗಿ ಪಾಲಿಕೆ ವರ್ಷಕ್ಕೆ ₹ 385 ಕೋಟಿ ವೆಚ್ಚ ಮಾಡುತ್ತಿತ್ತು. ಈಗ ಈ ಮೊತ್ತವು ₹ 1,066 ಕೋಟಿಗೆ ಹೆಚ್ಚಳವಾಗಿದೆ. ಹಣ ಲೂಟಿ ಮಾಡುವ ಸಲುವಾಗಿಯೇ ಈ ಮೊತ್ತ ಹೆಚ್ಚಿಸಿಕೊಳ್ಳಲಾಗಿದೆ’ ಎಂದು ಅವರು ದೂರಿದ್ದಾರೆ.
‘ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಬಿಡುಗಡೆ ಮಾಡಿರುವ ₹ 146.10 ಕೋಟಿ ಕೂಡ ಇದರಲ್ಲಿ ಸೇರಿಕೊಂಡಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ಕೇಂದ್ರ ಸರ್ಕಾರದ ಹಣ ದುರ್ಬಳಕೆ ಆಗಿರುವ ಕಾರಣ ಸಿಬಿಐಗೂ ದೂರು ನೀಡಲಾಗಿದೆ. ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೂ (ಎಸಿಬಿ) ದೂರು ಕೊಡಲಾಗಿದೆ’ ಎಂದು ಎನ್.ಆರ್. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.