ರಾಯಬಾಗ: ಕುಡಚಿ–ಬಾಗಲಕೋಟೆ ನೂತನ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ 2010ರಲ್ಲಿ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ ರೈಲು ತಡೆ ಹಿಡಿದು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಂಗಳವಾರ ರಾಯಬಾಗ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು.
ನಂತರ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು 2010ರಲ್ಲಿ ಕುಡಚಿ–-ಬಾಗಲಕೋಟೆ ರೈಲುಮಾರ್ಗಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರಿಂದಲೆ ಇಂದು ಈ ಮಾರ್ಗದ ಕೆಲಸ ಚುರುಕುಗೊಂಡು ಕಾಮಗಾರಿ ಪ್ರಾರಂಭವಾಗಿದೆ. ಇದು ನನಗೆ ಸಂತಸ ತಂದಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ರಾಜ್ಯದಲ್ಲಿರುವ ಪ್ರತಿ 10 ಜನರ ಪೈಕಿ 9 ಜನರಿಗೆ ರಾಜ್ಯ ಸರ್ಕಾರದ ಯೋಜನೆಗಳು ಮನೆಮನೆಗೆ ಮುಟ್ಟಿವೆ. ಹೀಗಾಗಿ ಮತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಸಚಿವ ಆರ್.ಬಿ. ತಿಮ್ಮಾಪುರ ಅವರ ಜೊತೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಜೀರ ಕಂಗನ್ನೊಳ್ಳಿ, ಸಾಹೇಬಲಾಲ ರೋಹಿಲೆ, ಮೃತ್ಯುಂಜಯ ತೆಳಗಿನಮಠ ಅವರು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಸುಕುಮಾರ ಕಿರಣಗಿ, ಮಹೇಶ ಕೊರವಿ, ರಾಜು ಶಿರಗಾಂವೆ, ಕಾಶೀಮ ಕಂಗನ್ನೊಳ್ಳಿ, ಮಾವುದ್ದೀನ್ ಚಮನಶೇಖ್, ಅಬಕಾರಿ ಇನ್ಸ್ಪೆಕ್ಟರ್ ಎಂ.ಎಸ್. ಪಾಟೀಲ, ಮಹಾವೀರ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.
ಈ ಪ್ರಕರಣದಲ್ಲಿ ಒಟ್ಟು 21 ಜನರಿದ್ದು ಈಗ ಅವರಲ್ಲಿ ಮೂರು ಗುಂಪುಗಳಾಗಿವೆ ಎಂದು ಹೇಳಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯರದು ಒಂದು ಹಾಗೂ ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿಯವರದು ಒಂದು ಗುಂಪು. ಹೀಗಾಗಿ ಈ ಮೂರು ಗುಂಪಿನವರು ಒಕ್ಕಟ್ಟಾಗಿ ಬಾರದ್ದದಿಂದ ಪ್ರಕರಣ ಮುಂದೆ ಹೋಗುತ್ತಿದೆ. ಹೀಗಾಗಿ ಅಬಕಾರಿ ಸಚಿವರಿಗೆ ವಾರಂಟ್ ಆಗಿತ್ತು ಎಂದು ಹೇಳಲಾಗುತ್ತಿದೆ.