ಹುಮನಾಬಾದ್: ‘ಮಾಣಿಕನಗರ ಮಾಣಿಕಪ್ರಭು ಮಹಾರಾಜರ ದ್ವಿಶತಾಬ್ದಿ ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ ಭರವಸೆ ನೀಡಿದರು.
ಮಾಣಿಕ ದ್ವಿಶತಾಬ್ದಿ ಮಹೋತ್ಸವದ ಪ್ರಯುಕ್ತ ಮಾಣಿಕಪ್ರಭು ಸಂಸ್ಥಾನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನ.13 ರಂದು ಆರಂಭವಾಗುವ ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿ ಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ₹ 30 ಲಕ್ಷ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ತಿಳಿಸಿದರು.
ನ.18ರಂದು ‘ಮ್ಯಾರಾಥಾನ’ ನಡೆಯಲಿದೆ. ಅಂದು ಅಗತ್ಯ ಬಂದೋಬಸ್ತ್ ಮಾಡಬೇಕು’ ಎಂದು ಇನ್ಸ್ಪೆಕ್ಟರ್ ಜಿ.ಎಸ್.ನ್ಯಾಮ ಗೌಡರಿಗೆ ಸೂಚನೆ ನೀಡಿದರು.
ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭು, ‘ಉತ್ಸವದ ಅಂಗವಾಗಿ ನ.13 ರಿಂದ ಡಿ.5ರವರೆಗೆ ಸೂಫಿ ಸಾಹಿತ್ಯ ವಿಚಾರಗೋಷ್ಠಿ, ಧಾರ್ಮಿಕ, ಸಂಗೀತ, ವೇದಶಾಸ್ತ್ರ, ನಗೆಹಬ್ಬ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಮಹಾಕುಂಬಾಭಿಷೇಕ ನಡೆಯಲಿದೆ’ ಎಂದರು.
ಚೈತನ್ಯರಾಜ ಪ್ರಭುಗಳು ಸ್ವಾಗತಿಸಿದರು. ತಹಶೀಲ್ದಾರ್ ಡಿ.ಎಂ.ಪಾಣಿ, ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗೋವಿಂದ, ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಜಿ.ಎಸ್.ನ್ಯಾಮಗೌಡರ ಇದ್ದರು.