ಹುಮನಾಬಾದ್: ‘ನಶಿಸಿ ಹೋಗುತ್ತಿರುವ ಜನಪದ ಕಲೆಯ ಸಂರಕ್ಷಣೆಗಾಗಿ ಕಲೆ–ಕಲಾವಿದರ ದಾಖಲೀಕರಣ ಮಾಡುವ ಅಗತ್ಯ ಇದೆ’ ಎಂದು ಪ್ರೊ. ನಾಗೇಂದ್ರ ಢೋಲೆ ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕ ವತಿಯಿಂದ ಮಂಗಳವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಸ್ಕೃತಿಯ ಮೂಲ ಬೇರು ಜನಪದ. ಅದನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಜೀವನದ ನೋವು– ನಲಿವಿನ ಕ್ಷಣಗಳನ್ನು ದಣಿವಾರಿಸಿಕೊಳ್ಳುವ ನೆಪದಲ್ಲಿ ಹಾಡುತ್ತಿದ್ದ ಕುಟ್ಟುವ –ಬೀಸುವ ಹಾಡುಗಳು ಈಗ ಸಂಪೂರ್ಣ ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿ’ ಎಂದು ಹೇಳಿದರು.
ಹಿರಿಯ ಸಾಹಿತಿ ಎಚ್. ಕಾಶೀನಾಥರೆಡ್ಡಿ ಮಾತನಾಡಿ, ‘ಮನುಷ್ಯ ಬದುಕುವ ರೀತಿ, ನೀತಿಗಳೇ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿಯ ಮೂಲ ಜೀವಾಳ ಜನಪದ’ ಎಂದು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಶಿವರಾಜ ಮೇತ್ರೆ, ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿದರು. ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಈಶ್ವರ ತಡೋಳಾ ಅಧ್ಯಕ್ಷತೆ ವಹಿಸಿದ್ದರು.
ಭೀಮಸೇನ ಗಾಯಕವಾಡ ಸ್ವಾಗತಿಸಿದರು. ಪ್ರಕಾಶ ಬೊಂಬಳಗಿ ಮಾತನಾಡಿದರು. ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಚೆಟ್ಟಿ ನಿರೂಪಿಸಿದರು.