ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದರಹಳ್ಳಿ: ಶ್ರೀಗಂಧ ಮರಗಳ ಕಳವು

ಮತ್ತೆ ಮರುಕಳುಹಿಸಿದ ಘಟನೆ: ಅರಣ್ಯ ಇಲಾಖೆ ವೈಫಲ್ಯದ ವಿರುದ್ಧ ಆಕ್ರೋಶ
Last Updated 5 ಅಕ್ಟೋಬರ್ 2017, 6:56 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಕೆಂಜಿಗೆ ಅರಣ್ಯದ ವ್ಯಾಪ್ತಿಯಲ್ಲಿರುವ ಬಿದರಹಳ್ಳಿ ಕಾಲೋನಿ ಪ್ರದೇಶದಲ್ಲಿ ಗುರುವಾರ ಮುಂಜಾನೆ ದಾಳಿ ನಡೆಸಿರುವ ಶ್ರೀಗಂಧಚೋರರು, ಸುಮಾರು ಐದು ಶ್ರೀಗಂಧದ ಮರಗಳನ್ನು ಕತ್ತರಿಸಿ ಕಳ್ಳತನ ಮಾಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಇದೇ ಮೀಸಲು ಅರಣ್ಯದ ಬಸವನಹಳ್ಳಿ ಗ್ರಾಮಕ್ಕೆ ದಾಳಿ ನಡೆಸಿದ್ದ ಶ್ರೀಗಂಧ ಚೋರರು, ಸುಮಾರು ಆರು ಮರಗಳನ್ನು ಕಟಾವು ಮಾಡಿದ್ದರು. ಆ ಘಟನೆ ಮಾಸುವ ಮುನ್ನವೇ ಪುನಃ ಐದು ಮರಗಳಿಗೆ ಕಟಾವಿನ ಯಂತ್ರ ಬಿದ್ದಿರುವುದು ಅರಣ್ಯ ಇಲಾಖೆಯು ಬೆಲೆ ಬಾಳುವ ಮರಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ ಎಂಬ ಗ್ರಾಮಸ್ಥರ ಆರೋಪಕ್ಕೆ ಪುಷ್ಟಿ ಬಂದಂತಾಗಿದೆ.

ಶ್ರೀಗಂಧಚೋರರು ಗುರುವಾರ ಮುಂಜಾನೆ ದಾಳಿ ನಡೆಸಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದು, ಮರಕೊಯ್ಯುವ ಯಂತ್ರದ ಮೂಲಕ ಬಿದರಹಳ್ಳಿಯ ಬಿ.ಬಿ. ನಾರಾಯಣ ಎಂಬುವವರ ಜಮೀನಿನ ಬೇಲಿಯ ಪಕ್ಕದಲ್ಲಿದ್ದ ಒಂದು ಮರ ಹಾಗೂ ಸರ್ಕಾರಿ ಗೋಮಾಳದಲ್ಲಿದ್ದ ನಾಲ್ಕು ಶ್ರೀಗಂಧದ ಮರಗಳನ್ನು ಕಟಾವು ಮಾಡಿದ್ದು, ಅಪಾರ ಪ್ರಮಾಣದ ಶ್ರೀಗಂಧವನ್ನು ದೋಚಿದ್ದಾರೆ. ಘಟನೆಯ ಕುರಿತಂತೆ ಗುರುವಾರ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರೂ, ಸಂಜೆವರೆಗೂ ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದು ಅರಣ್ಯ ಅಧಿಕಾರಿಗಳಿಗೆ ಮೀಸಲು ಅರಣ್ಯವನ್ನು ಸಂರಕ್ಷಿಸುವಲ್ಲಿ ಇರುವ ಕಾಳಜಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಜಾವಾಣಿ ಎದುರು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.

ಎರಡು ತಿಂಗಳ ಹಿಂದೆ ಬಸವನ ಹಳ್ಳಿಯಲ್ಲಿ ಶ್ರೀಗಂಧದ ಮರಗಳನ್ನು ಕಡಿದ ಪ್ರಕರಣ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದಂತೆ, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಕೆಲವು ಗುಮಾನಿ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ಬಹಿರಂಗವಾಗಿಯೇ ಆರೋಪ ಮಾಡಿದ್ದರೂ, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮತ್ತೊಮ್ಮೆ ಘಟನೆ ಮರುಕಳುಹಿಸುವಂತಾಗಿದೆ.

ಕೆಲವು ಮರಗಳ್ಳ ರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ನಂಟಿದ್ದು, ಶ್ರೀಗಂಧದ ಮರ ಕಳ್ಳತನದಲ್ಲೂ ಸಿಬ್ಬಂದಿ ಕೈವಾ ಡವಿರುವ ಶಂಕೆಯಿದೆ. ಶಂಕಿತ ಸಿಬ್ಬಂದಿ ದೂರವಾಣಿ ಕರೆಗಳ ತಪಾಸಣೆ ನಡೆಸಿದರೆ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚ ಬಹುದಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೆಂಜಿಗೆ ಅರಣ್ಯದಲ್ಲಿ ಅಪಾರ ಪ್ರಮಾಣದಲ್ಲಿ ಶ್ರೀಗಂಧದ ಸಸ್ಯಗಳಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡು ಮಲೆನಾಡಿನಲ್ಲಿ ಮರೆಯಾಗುತ್ತಿರುವ ಶ್ರೀಗಂಧದ ಸಸ್ಯಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT