ಪಟ್ಟಣದ ಕೋಟೆ ಬಡಾವಣೆಯ ಶ್ರೀರಾಮದೇವರ ಬೀದಿಯ ಕೆಲವು ಮನೆಗಳಿಗೆ ಮತ್ತೆ ಚರಂಡಿಯ ಕೊಳಚೆ ನೀರು ನುಗ್ಗುವಂತಾಗಿದೆ. 20 ದಿನಗಳ ಹಿಂದೆ ಈ ರೀತಿ ಅವಘಡ ಸಂಭವಿಸಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಸ್ಥಳೀಯ ಪುರಸಭೆ ನೂರಾರು ಮಂದಿ ಕಾರ್ಮಿಕರನ್ನು ಇಟ್ಟುಕೊಂಡು ಇಲ್ಲಿನ ಭೈರಪ್ಪನ ಬೆಟ್ಟದಿಂದ ಹರಿದು ಇಲ್ಲಿಗೆ ಬಂದಿದ್ದ ಮಣ್ಣನ್ನು ತೆಗೆಸಿ, ಕಟ್ಟಿಕೊಂಡಿದ್ದ ಚರಂಡಿ ಸ್ವಚ್ಛಗೊಳಿಸಿತ್ತು. ಬೆಟ್ಟದ ಮೇಲಿಂದ ಮನೆಗಳ ಕಡೆಗೆ ನೀರು ಹರಿದು ಬರದಂತೆ ಟ್ರಂಚ್ ಹೊಡೆದು, ಮರಳಿನ ಚೀಲಗಳನ್ನು ಜೋಡಿಸಲಾಗಿತ್ತು.
ಈ ಕಾರ್ಯ ವಿಫಲವಾಗಿದ್ದು, ಮತ್ತೆ ಬೆಟ್ಟದ ಮೇಲಿಂದ ಸಾಕಷ್ಟು ಮಣ್ಣು ಹರಿದು ಬಂದಿದ್ದು, ಇಲ್ಲಿನ ಚರಂಡಿ ಕಟ್ಟಿಕೊಂಡಿದೆ. ಮಳೆ ಬಂದ ತಕ್ಷಣ ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಪುರಸಭೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳಾದ ಪಾರ್ವತಮ್ಮ, ಗೀತಮ್ಮ, ನಾಗರಾಜು ಮನವಿ ಮಾಡಿದ್ದಾರೆ.