ಕೆಜಿಎಫ್: ಇಟ್ಟಿಗೆ ಕಾರ್ಖಾನೆಯ ಚಿಮಣಿ ಕುಸಿದು ಪಕ್ಕದ ಶೆಡ್ನಲ್ಲಿ ಮಲಗಿದ್ದ ಮಗು ಸೇರಿದಂತೆ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ಸಮೀಪದ ಜೆಕೆಪುರಂ ಬಳಿ ನಡೆದಿದೆ.
ಗ್ರಾಮದ ರಾಜ್ಪೇಟೆ ರಸ್ತೆಯಲ್ಲಿರುವ ಜೈರಾಜ್ ಎಂಬುವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶೌಕರ್ (60), ಅವರ ಪತ್ನಿ ಫಾತಿಮಾ (50) ಮತ್ತು ಮೊಮ್ಮಗ ನಯಾಜ್ (5) ಮೃತಪಟ್ಟವರು.
ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 30 ಅಡಿ ಉದ್ದದ ಚಿಮಣಿ ಕುಸಿದು ಶೆಡ್ ಮೇಲೆ ಬಿದ್ದಿದೆ. ಅವಶೇಷಗಳಡಿ ಸಿಲುಕಿದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ನಯಾಜ್ ಬೆಂಗಳೂರಿನ ಚೆನ್ನಸಂದ್ರದ ಬ್ಲೂಮರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಲ್ಕೆಜಿ ಓದುತ್ತಿದ್ದು, ರಾತ್ರಿ ಅಜ್ಜಿ ತಾತನ ಜೊತೆಗೆ ಮಲಗಬೇಕು ಎಂದು ಪಟ್ಟು ಹಿಡಿದು ಗೋದಾಮಿನಲ್ಲಿ ಮಲಗಿದ್ದನು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಪ್ರಭಾರ) ಡಾ.ರೋಹಿಣಿ ಕಟೋಚ್, ಡಿವೈಎಸ್ಪಿ ಬಿ.ಎಲ್.ಶ್ರೀನಿವಾಸಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆಂಡರಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.