ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕ್ರಿಕೆಟ್‌ನ ಮಿಂಚು ಹರಿಸುವ ಹುಮ್ಮಸ್ಸು

ರಣಜಿ ಕ್ರಿಕೆಟ್ ಟೂರ್ನಿಯ 84ನೇ ಆವೃತ್ತಿಯ ಪಂದ್ಯಗಳು ಇಂದು ಆರಂಭ
Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಣಜಿ ಕ್ರಿಕೆಟ್‌ನ 84ನೇ ಆವೃತ್ತಿಯ ಪಂದ್ಯಗಳಿಗೆ ಶುಕ್ರವಾರ ಚಾಲನೆ ಸಿಗಲಿದೆ. ಕಳೆದ ಬಾರಿ ತವರಿನಲ್ಲಿ ಪಂದ್ಯಗಳನ್ನು ಆಡಿಸದೇ ಇರುವ ಪ್ರಯೋಗ ಮಾಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿ ಅದನ್ನು ಕೈಬಿಟ್ಟಿದೆ. ಆದ್ದರಿಂದ ತವರಿನಲ್ಲೂ ಪಂದ್ಯಗಳನ್ನು ಆಡುವ ಅವಕಾಶ ತಂಡಗಳಿಗೆ ಮತ್ತೆ ಲಭಿಸಿದೆ.

ಭಾರತ ತಂಡದ ಮುಂದಿನ ಟೆಸ್ಟ್ ಪಂದ್ಯ ನವೆಂಬರ್‌ 16ರಂದು ಆರಂಭಗೊಳ್ಳಲಿದೆ. ಆದ್ದರಿಂದ ರಣಜಿ ಟೂರ್ನಿಯ ಆರಂಭದ ಕೆಲವು ಪಂದ್ಯಗಳು ಪ್ರಮುಖ ಆಟಗಾರರಿಗೆ ಮಹತ್ವದ್ದಾಗಲಿವೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಪಂದ್ಯಗಳನ್ನು ಆಡಿ ಮರಳಿರುವ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಮತ್ತು ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರಿಗೆ ಐದು ದಿನಗಳ ಪಂದ್ಯಕ್ಕೆ ಹೊಂದಿಕೊಳ್ಳಲು ರಣಜಿ ಟೂರ್ನಿ ಅವಕಾಶ ಒದಗಿಸಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕಾಯ್ದಿರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಅಭಿನವ್ ಮುಕುಂದ್ ಅವರಿಗೂ ರಣಜಿ ಟೂರ್ನಿಯ ಆರಂಭಿಕ ಪಂದ್ಯಗಳು ಮಹತ್ವದ್ದಾಗಲಿವೆ.

ತಮಿಳುನಾಡಿನ ಈ ಆಟಗಾರರು ರಣಜಿಯ ಮೊದಲ ಪಂದ್ಯದಲ್ಲಿ ಆಂಧ್ರ ತಂಡದ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ಚೇತೇಶ್ವರ ಪೂಜಾರ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ನಾಯಕ. ಈ ತಂಡದಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಕೂಡ ಇದ್ದಾರೆ. ಭಾರತ ಏಕದಿನ ಮತ್ತು ಟ್ವೆಂಟಿ–20 ತಂಡದಿಂದ ದಿಢೀರ್ ಹೊರಬಿದ್ದ ಅವರಿಗೂ ರಣಜಿ ಟೂರ್ನಿ ಮಹತ್ವದ್ದಾಗ ಲಿದೆ.

ಸರ್ವಿಸಸ್ ವಿರುದ್ಧ ಮೊದಲ ಪಂದ್ಯ ಆಡಲಿರುವ ಬಂಗಾಳದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಮತ್ತು ವೇಗಿ ಮಹಮ್ಮದ್ ಶಮಿ ಕೂಡ ರಣಜಿಯಲ್ಲಿ ಮಿಂಚುವ ಭರವಸೆ ಹೊಂದಿದ್ದಾರೆ.

ದೆಹಲಿ ತಂಡವನ್ನು ವೇಗಿ ಇಶಾಂತ್ ಶರ್ಮಾ ಮುನ್ನಡೆಸುವರು. ಕಳೆದ ವರ್ಷದ ಜನವರಿಯಿಂದ ಏಕದಿನ ಪಂದ್ಯ ಆಡದೇ ಇರುವ ಮತ್ತು 2013ರಿಂದ ಟ್ವೆಂಟಿ–20 ತಂಡದಲ್ಲಿ ಸ್ಥಾನ ಪಡೆಯದೇ ಇರುವ ಇಶಾಂತ್ ಶರ್ಮಾ ಅವರಿಗೆ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ರಣಜಿಯಲ್ಲಿ ಉತ್ತಮ ಆಟ ಆಡಿ ಸಾಮರ್ಥ್ಯ ತೋರುವುದು ಅನಿವಾ ರ್ಯವಾಗಿದೆ.

ತವರಿನಲ್ಲಿ ಪಂದ್ಯ: ಮಿಶ್ರ ಪ್ರತಿಕ್ರಿಯೆ

ತವರಿನಲ್ಲೂ ಪಂದ್ಯಗಳನ್ನು ಆಡಿಸುವ ನಿರ್ಧಾರಕ್ಕೆ ಆಟಗಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸಂಸ್ಥೆಗಳು ಇತರ ರಾಜ್ಯಗಳ ತಂಡಗಳಿಗೆ ಸೂಕ್ತ ಗೌರವ ನೀಡುವುದಿಲ್ಲ ಎಂದು ಅಭಿನವ್ ಮುಕುಂದ್‌ ಮತ್ತು ಅಕ್ಷರ್ ಪಟೇಲ್ ಹೇಳಿದ್ದರೆ ಸಾಂಪ್ರದಾಯಿಕ ಮಾದರಿಯನ್ನು ಮತ್ತೆ ಜಾರಿಗೆ ತಂದಿರುವುದು ಸಂತಸದ ವಿಷಯ ಎಂದು ಬರೋಡಾ ತಂಡದ ನಾಯಕ ಇರ್ಫಾನ್ ಪಠಾಣ್‌ ಹೇಳಿದ್ದಾರೆ.

ಈ ಬಾರಿ 28 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು ಎಲ್ಲ ತಂಡಗಳೂ ಸಮಾನ ಸಂಖ್ಯೆಯ ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದುವ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪಲಿವೆ. ಕಳೆದ ಬಾರಿ ಗುಜರಾತ್ ತಂಡ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿದ್ದು ಈ ಬಾರಿಯೂ ಹೊಸ ತಂಡ ಪ್ರಶಸ್ತಿಗೆ ಮುತ್ತಿಡುವುದೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ಕರ್ನಾಟಕ ತಂಡದ ಮೊದಲ ಪಂದ್ಯ ಅಕ್ಟೋಬರ್ 14ರಂದು ಅಸ್ಸಾಂ ತಂಡದ ವಿರುದ್ಧ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT