ಬೆಂಗಳೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೆಸರಘಟ್ಟ ಹೋಬಳಿಯ ಸೀರೆಸಂದ್ರ, ಬ್ಯಾತ, ಕಾಕೋಳು ಗ್ರಾಮಗಳ ಕೆರೆಗಳು ತುಂಬಿದ್ದು, ಇನ್ನೆರಡು ದಿನ ಮಳೆ ಮುಂದುವರಿದರೆ ಕೆರೆಗಳ ಕೋಡಿ ಹರಿಯಲಿದೆ.
‘ಎಲ್ಲಾ ಕೆರೆಗಳಲ್ಲೂ ಹೂಳು ತೆಗೆದು ಅಭಿವೃದ್ಧಿಪಡಿಸಿದ್ದರೆ, ಇನ್ನೂ ಹೆಚ್ಚು ನೀರು ಸಂಗ್ರಹವಾಗುತ್ತಿತ್ತು. ಆಗ ಬೇಸಿಗೆಯಲ್ಲಿ ಮೆಕ್ಕೆಜೋಳ, ಟೊಮೆಟೊ, ಎಲೆಕೋಸು ಬೆಳೆಯಲು ಅನುಕೂಲವಾಗುತ್ತಿತ್ತು’ ಎಂದು ಬಿಳಿಜಾಜಿ ಗ್ರಾಮದ ರೈತ ಗೋವಿಂದ ರಾಜು ತಿಳಿಸಿದರು.
‘ಮಳೆಗಾಲಕ್ಕೂ ಮುನ್ನ ಕೆರೆ ಅಭಿವೃದ್ಧಿ ಪಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆವು. ಆದರೆ, ಆ ಬಗ್ಗೆ ಅಧಿಕಾರಿಗಳು ಗಮನ ಹರಿಸಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಗೆ ಉರುಳಿದ ಮರ: ಚಿಕ್ಕಬಾಣಾವರದ ಬಳಿ ಮಳೆ ಗಾಳಿಗೆ ನೀಲಗಿರಿ ಮರವೊಂದು ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದು ನಾಲ್ಕು ತಾಸುಗಳು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಸೋಲದೇವನಹಳ್ಳಿ ಬೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿದರು.