ಮೂಡಲಗಿ: ‘ಮುಂದಿನ ಸಚಿವ ಸಂಪುಟದಲ್ಲಿ ಮೂಡಲಗಿ ತಾಲ್ಲೂಕು ರಚನೆಗೆ ಆಡಳಿತಾತ್ಮಕ ಅನುಮೋದನೆ ಯನ್ನು ಖಂಡಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ತಾವು ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೂಡಲಗಿ ತಾಲ್ಲೂಕು ರಚನೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.
ಸೆಪ್ಟೆಂಬರ್ 6ರಂದು 49 ಹೊಸ ತಾಲ್ಲೂಕುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಆದೇಶದಲ್ಲಿ ಮೂಡಲಗಿ ತಾಲ್ಲೂಕುವನ್ನು ಕೈಬಿಟ್ಟಿರುವ ಬಗ್ಗೆ ಜನರಲ್ಲಿ ಉಂಟಾದ ಆಕ್ರೋಶದ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಮನವಿಗೆ ಸ್ಪಂದಿಸಿದ್ದು, ಮುಂಬರುವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲ್ಲೂಕು ಪ್ರಸ್ತಾವ ವಿಷಯವನ್ನು ಸಂಪುಟಕ್ಕೆ ತರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದಾರೆ ಎಂದು ಜಾರಕಿಹೊಳಿ ಅವರು ತಿಳಿಸಿದ್ದಾರೆ.