ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಕ್ಷೇತ್ರದಲ್ಲೂ ಬಿಎಸ್‌ಪಿ ಸ್ಪರ್ಧೆ’

Last Updated 6 ಅಕ್ಟೋಬರ್ 2017, 5:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜ್ಯದಲ್ಲಿ ಮುಂಬರುವ 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಗುರುವಾರ ಬಹುಜನ ಸಮಾಜ ಪಕ್ಷ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಕಾರ್ಯಕರ್ತರ ಸಭೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಎಚ್ಚರಿಸಿ ಸಂಘಟನೆಯಲ್ಲಿ ತೊಡಗಿಸುವ ಸಲುವಾಗಿ ಮೈಸೂರು ಭಾಗದಲ್ಲಿ 6 ಲೋಕಸಭಾ ಕ್ಷೇತ್ರ, 48 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಹೊರಟಿದ್ದೇನೆ. ಈಗಾಗಲೇ ಹಲವು ಕಡೆ ಸಭೆ ನಡೆಸಲಾಗಿದೆ. 2018ರ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ' ಎಂದು ತಿಳಿಸಿದರು.

ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಇಡೀ ರಾಜ್ಯವನ್ನು 6 ವಲಯಗಳಾಗಿ ಮಾಡಿ ಎಲ್ಲ ವಲಯಗಳಿಗೂ ಮುಖಂಡರು ಹಾಗೂ ಉಸ್ತುವಾರಿ ನೇಮಿಸಲಾಗಿದೆ. 6 ತಂಡಗಳು ಕೆಲಸ ಮಾಡುತ್ತಿವೆ ಎಂದರು.

ನ. 26ರಂದು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷೆ ಮಾಯಾವತಿ ಬೆಂಗಳೂರಿಗೆ ಬರಲಿದ್ದು, ಪದಾಧಿಕಾರಿಗಳ ಸಮ್ಮೇಳನ ನಡೆಸಲಿದ್ದಾರೆ. ಸಮ್ಮೇಳನಕ್ಕೆ 25,000 ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವಾಲ್ಮೀಕಿ ರಾಮಾಯಣ ಸತ್ಯಾಂಶವನ್ನು ಒಳಗೊಂಡಿದೆ. ಟಿವಿಯಲ್ಲಿ ಬರುವ ತುಳಸಿ ರಾಮಾಯಣ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದ ಅವರು, ರಾಮಾಯಣ 60 ಭಾಷೆಗೆ ಅನುವಾದಗೊಂಡಿದೆ ಎಂದು ತಿಳಿಸಿದರು.

ಪಕ್ಷದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಪಿ. ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ನಗರಸಭೆ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಉಪಾಧ್ಯಕ್ಷರಾದ ಪಿ. ಮಹದೇವಪ್ಪ, ದೌಲತ್‌ಪಾಷ, ಸಂತೇಮರಹಳ್ಳಿ ಬ್ಲಾಕ್ ಅಧ್ಯಕ್ಷ ಗುರುರಾಜು ಆಚಾರ್, ಮುಖಂಡ ರಾಜಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT