ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಸನಾತನ ಸಂಸ್ಥೆಯ ನಂಟು ಹೊಂದಿರುವ ಐದು ಮಂದಿ ಆರೋಪಿಗಳ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಐದು ಮಂದಿ ಪೈಕಿ ನಾಲ್ವರ ವಿರುದ್ಧ 2009ರ ಮಡಗಾಂವ್ ಸ್ಫೋಟದಲ್ಲಿ ಭಾಗಿಯಾದ ಆರೋಪಗಳಿದ್ದು ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡಾ ಹೊರಡಿಸಲಾಗಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಈ ಐದು ಮಂದಿ ಆರೋಪಿಗಳ ಪಾತ್ರದ ಬಗ್ಗೆಯೂ ವಿಶೇಷ ತನಿಖಾ ತಂಡದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವಿಚಾರವಾದಿಗಳಾಗಿದ್ದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಗಳಲ್ಲಿಯೂ ರುದ್ರ ಪಾಟೀಲ್, ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
2009ರ ಅಕ್ಟೋಬರ್ 19ರಂದು ನಡೆದ ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರವೀಣ್ ಲಿಮ್ಕರ್, ಜಯಪ್ರಕಾಶ್, ಸಾರಂಗ್ ಅಕೋಲ್ಕರ್ ಮತ್ತು ರುದ್ರ ಪಾಟೀಲ್ ಪ್ರಮುಖ ಆರೋಪಿಗಳಾಗಿದ್ದು ಇವರ ವಿರುದ್ಧ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದ ರೀತಿಯಲ್ಲೇ ಗೌರಿ ಲಂಕೇಶ್ ಹತ್ಯೆಯೂ ನಡೆದಿದೆ. 7.65 ಎಂಎಂ ಪಿಸ್ತೂಲ್ನಿಂದಲೇ ಈ ಎಲ್ಲರ ಹತ್ಯೆಯೂ ನಡೆದಿರುವುದು ಒಂದೇ ತಂಡ ಈ ಎಲ್ಲರ ಹತ್ಯೆ ಹಿಂದಿದೆ ಎಂಬ ಅನುಮಾನ ಗಟ್ಟಿಗೊಳ್ಳುವಂತೆ ಮಾಡಿದೆ.