ಸವಣೂರ: ತಾಲ್ಲೂಕಿನ ಕಾರಡಗಿ, ಮಂತ್ರೋಡಿ, ಗುಂಡೂರ, ಚಿಲ್ಲೂರು, ಬಡ್ನಿ, ಶಿರಬಡಗಿ, ಕಡಕೋಳ ಗ್ರಾಮಗಳು ಸೇರಿದಂತೆ ಲದ್ದಿ ಹುಳ ಬಾಧೆಯಿಂದ ಹಾನಿಗೊಂಡ ಮೆಕ್ಕೆಜೋಳದ ಹೊಲಗಳಿಗೆ ಬುಧವಾರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್.ಕಟ್ಟೇಗೌಡ್ರ, ಕಲಾಲ ಮತ್ತಿತರ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲಿಸಿತು.
ಈ ವೇಳೆ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್.ಕಟ್ಟೇಗೌಡ್ರ, ‘ಮಳೆಯ ಪರಿಣಾಮ ಗೋವಿನಜೋಳಕ್ಕೆ ಲದ್ದಿ (ಸೈನಿಕ)ಹುಳುಗಳ ಹಾವಳಿ ಶುರುವಾಗಿದ್ದು, ಸರಿಯಾಗಿ ಉಪಚರಿಸದಿದ್ದರೆ ಬೆಳೆ ನಷ್ಟದ ಅಪಾಯ ಇದೆ. ಅದಕ್ಕಾಗಿ ಬೆಳೆಗಳಿಗೆ ಔಷಧಿ ಸಿಂಪಡಿಸಬೇಕು’ ಎಂದು ರೈತರಿಗೆ ಸಲಹೆ ನೀಡಿದರು.
‘ತಾಲ್ಲೂಕಿನಲ್ಲಿ 10,120 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಬೆಳೆಯು ತೆನೆ ಮತ್ತು ಕಾಳು ಕಟ್ಟುವ ಹಂತದಲ್ಲಿವೆ. ಸವಣೂರ ಹಾಗೂ ಹತ್ತಿಮತ್ತೂರ ಹೋಬಳಿಗಳಲ್ಲಿ ಲದ್ದಿ ಹುಳುವಿನ ಬಾಧೆ ಕಂಡುಬಂದಿದೆ’ ಎಂದು ಅವರು ತಿಳಿಸಿದ್ದಾರೆ. ಕೀಟಗಳ ನಿಯಂತ್ರಣ ಕ್ರಮಗಳ ಬಗ್ಗೆ ರೈತರಿಗೆ ಅಧಿಕಾರಿಗಳು ತಂಡವು ಇದೇ ವೇಳೆ ವಿವರಿಸಿತು.