ಕಲಬುರ್ಗಿ: ‘ದೇಶದ ಜನರಿಗೆ ಕನಸು ತೋರಿಸಿದ್ದೇ ಮೋದಿ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಜನಧನ ಖಾತೆಗೆ ಹಣ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಮೋಸ ಮಾಡಿದ್ದಾರೆ’ ಎಂದು ಜೆಡಿಎಸ್ ಯುವ ಮುಖಂಡ ನಾಸಿರ್ ಹುಸೇನ್ ಹೇಳಿದರು. ಇಲ್ಲಿನ ಮುಸ್ಲಿಂ ಚೌಕ್ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದೇಶದಲ್ಲಿರುವ ಕಪ್ಪುಹಣ ಮರಳಿ ತರುವುದಾಗಿ ಚುನಾವಣೆಗೂ ಮೊದಲು ಭರವಸೆ ನೀಡಿ, ಈಗ ಪಲಾಯನವಾದಿಯಾಗಿದ್ದಾರೆ. ನೋಟು ರದ್ದತಿ ಮೂಲಕ ಬಡಜನರಿಗೆ ಕಷ್ಟಕೊಟ್ಟಿದ್ದೇ ಕೇಂದ್ರ ಸರ್ಕಾರದ ದೊಡ್ಡ ಸಾಧನೆ’ ಎಂದು ಟೀಕಿಸಿದರು.
‘ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್, ಮುಖಂಡರಾದ ಜಾವೀದ್, ಹಬೀದ್ ಸಮಸ್ತ, ಪೈಸಲ್, ರಹೀಂ ಸೇಠ್, ಓಯಜ್ ಸಾಹೇಬ್, ಅದನ್ ಖಾನ್, ಗಜಾನಂದ ದೇಶಪಾಂಡೆ ಇದ್ದರು.