ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧದರ್ಶನ

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ಅವಲೋಕಿತ

*

ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿ, ಜಗತ್ತಿನಾದ್ಯಂತ ಹರಡಿರುವ ಧರ್ಮವೇ ಬೌದ್ಧಧರ್ಮ. ಇಂದು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ‘ಝೆನ್‌’ಗೂ ಬೌದ್ಧದರ್ಶನಕ್ಕೂ ನಂಟು ಉಂಟು. ಚೀನಾ, ಜಪಾನ್‌, ಶ್ರೀಲಂಕಾ, ಕೊರಿಯಾ, ವಿಯೆಟ್ನಾಂ, ಮ್ಯಾನ್ಮಾರ್‌ – ಹೀಗೆ ಹಲವು ದೇಶಗಳ ಸಂಸ್ಕೃತಿಗಳನ್ನು ಬೌದ್ಧದರ್ಶನ ಪ್ರಭಾವಿಸಿದೆ. ಇದನ್ನು ಬೌದ್ಧಧರ್ಮ ಎನ್ನಬೇಕೆ; ಬೌದ್ಧಮತ ಎನ್ನಬೇಕೆ; ಬೌದ್ಧದರ್ಶನ ಎನ್ನಬೇಕೆ – ಇಂಥ ಪ್ರಶ್ನೆಗಳನ್ನು ಮುಂದೆ ನೋಡೋಣ. ಸದ್ಯಕ್ಕೆ ಬೌದ್ಧಧರ್ಮ ಎಂದರೆ ಏನು ಎಂದು ತಿಳಿದುಕೊಳ್ಳೋಣ.

‘ಬೌದ್ಧಧರ್ಮ’ ಎಂದರೆ ‘ಬುದ್ಧನಿಂದ ಆದ ಧರ್ಮ’ ಎಂದು ಸರಳವಾಗಿ ಅರ್ಥೈಸಬಹುದು. ಬುದ್ಧ ಎಂಬ ವ್ಯಕ್ತಿಯಿಂದ ಮುನ್ನೆಲೆಗೆ ಬಂದ ಧಾರ್ಮಿಕ ಪಂಥವಿದು. ಆದರೆ ಬುದ್ಧ ಎನ್ನುವುದು ಆ ಮೂಲಪುರುಷನ ಮೂಲ ಹೆಸರು ಅಲ್ಲ. ‘ಬುದ್ಧ’ ಎಂದರೆ ‘ಜ್ಞಾನವನ್ನು ಪಡೆದವನು’, ‘ಅರಿವನ್ನು ಸಂಪಾದಿಸಿದವನು’, ‘ಸದಾ ಎಚ್ಚರಿಕೆಯಲ್ಲಿ ನಿಂತವನು’, ‘ಸಂಬೋಧಿಯನ್ನು ಗಳಿಸಿದವನು’, ‘ಪ್ರಜ್ಞೆಯನ್ನು ದಕ್ಕಿಸಿಕೊಂಡವನು’, ‘ಮೋಕ್ಷವನ್ನು ಹೊಂದಿದವನು’ – ಹೀಗೆಲ್ಲ ಅರ್ಥ ಮಾಡಬಹುದು. ಇದರ ಅರ್ಥ: ‘ಬುದ್ಧ’ ಎನ್ನುವುದು ವ್ಯಕ್ತಿನಿಷ್ಠವಾದ ವಿವರ ಅಲ್ಲ; ಅದೊಂದು ತತ್ತ್ವ; ತಾತ್ವಿಕತೆ; ಅರಿವಿನ ಹಂತ. ಬುದ್ಧತ್ವದ ಸ್ಥಿತಿಯನ್ನು ಪಡೆದವರೆಲ್ಲರೂ ‘ಬುದ್ಧ’ರೇ ಹೌದು. ಹೀಗಿದ್ದರೂ ‘ಸಿದ್ಧಾರ್ಥ’ ಎಂಬ ಐತಿಹಾಸಿಕ ವ್ಯಕ್ತಿಯಿಂದಲೇ ಈ ಧರ್ಮವನ್ನು ಗುರುತಿಸಲಾಗುತ್ತದೆ.

ಕ್ರಿ. ಪೂ. 566ರಲ್ಲಿ ಬುದ್ಧ ಜನಿಸಿದ ಎಂದು ಒಂದು ಅಂದಾಜು. ಜನ್ಮವರ್ಷದ ಬಗ್ಗೆ ಏಕಾಭಿಪ್ರಾಯವಿಲ್ಲ. ‘ಸಿದ್ಧಾರ್ಥ’ ಎನ್ನುವುದು ಈ ‘ಬುದ್ಧ’ನ ಮೊದಲ ಹೆಸರು. ಗೌತಮ (ಗೋತಮ) ಎಂದೂ ಹೇಳುವುದುಂಟು. ತಾಯಿ ಮಾಯಾದೇವಿ; ತಂದೆ ಶುದ್ಧೋದನ. ಅವನು ಶಾಕ್ಯಕುಲದ ರಾಜಕುಮಾರನಾಗಿದ್ದವನು. ಬದುಕಿನ ಸ್ಥಿತಿ–ಗತಿಗಳನ್ನು ಕುರಿತು ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಅರಮನೆಯಿಂದ ಹೊರಟ. ಹಲವು ವರ್ಷಗಳ ಸಾಧನೆಯಿಂದ ಜೀವನದ ರಹಸ್ಯಕ್ಕೆ ಉತ್ತರವನ್ನು ಕಂಡುಕೊಂಡ. ‘ಸಿದ್ಧಾರ್ಥ’ನಾಗಿದ್ದವನು ಈಗ ‘ಬುದ್ಧ’ನಾದ.  ತಾನು ಪಡೆದ ಕಾಣ್ಕೆಯನ್ನು ತನ್ನ ಕೊನೆಯ ಉಸಿರಿನ ತನಕ ಜಗತ್ತಿಗೂ ಹಂಚಿ ಜಗದ್ಗುರು ಎನಿಸಿದ. ಅಲೌಕಿಕ ತತ್ತ್ವಗಳಿಗಿಂತಲೂ ಲೌಕಿಕವಾದ ವಿವರಗಳಿಗೇ ಹೆಚ್ಚು ಒತ್ತನ್ನು ನೀಡಿದ್ದು ಬುದ್ಧನ ವಿಶೇಷ. ವ್ಯಕ್ತಿಯ ಶೀಲ–ಗುಣಗಳು ಬದಲಾವಣೆಯಾಗದೆ ಹೊರತು ಅಧ್ಯಾತ್ಮದಲ್ಲಿ ಶ್ರದ್ಧೆ ಒದಗದು ಎಂಬುದು ಅವನ ನಿಲುವು. ಈ ವಿವರಗಳನ್ನು ಮುಂದೆ ಹಂತ ಹಂತವಾಗಿ ನೋಡಬಹುದು.

ಬುದ್ಧ ಹುಟ್ಟಿದ್ದು ವೈಶಾಖ ಶುಕ್ಲ ಹುಣ್ಣಿಮೆ ಎನ್ನುವುದು ಪರಂಪರೆಯಲ್ಲಿ ಬಂದಿರುವ ಒಕ್ಕಣೆ. ಸಿದ್ಧಾರ್ಥನಾಗಿದ್ದವನು ಬೋಧಿವೃಕ್ಷದ ಕೆಳಗೆ ಸಮ್ಯಕ್‌ ಸಂಬೋಧಿಯನ್ನು ಪಡೆದು, ‘ಬುದ್ಧ’ನಾದದ್ದು ಕೂಡ ವೈಶಾಖ ಶುಕ್ಲ ಹುಣ್ಣಿಮೆ. ಹೀಗೆಯೇ, ಅವನು ದೇಹತ್ಯಾಗ ಮಾಡಿ ಮಹಾಪರಿನಿರ್ವಾಣಕ್ಕೆ ಸಂದದ್ದು ಕೂಡ ವೈಶಾಖ ಶುಕ್ಲ ಹುಣ್ಣಿಮೆಯಂದೇ. ಆದುದರಿಂದಲೇ ಬೌದ್ಧದರ್ಶನದಲ್ಲಿ ವೈಶಾಖ ಹುಣ್ಣಿಮೆಗೆ ತುಂಬ ಪ್ರಾಶಸ್ತ್ಯವಿದೆ.

ಬುದ್ಧನ ಉಪದೇಶಗಳು ದೊರೆಯುವುದು ಪಾಲೀಭಾಷೆಯಲ್ಲಿ. ಇವನ್ನು ‘ಬುದ್ಧವಚನ’ ಎಂದು ಕರೆಯಲಾಗುತ್ತದೆ. ಈ ವಾಙ್ಮಯವನ್ನು ‘ತ್ರಿಪಿಟಿಕ’ (ತಿ–ಪಿಟಕ) ಎಂದು ಕರೆಯುತ್ತಾರೆ. ಬೌದ್ಧದರ್ಶನದ ಎರಡು ಪ್ರಮುಖ ಶಾಖೆಗಳು: ಹೀನಯಾನ ಮತ್ತು ಮಹಾಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT