ನವದೆಹಲಿ: ಮರಣದಂಡನೆಯನ್ನು ಗಲ್ಲಿಗೆ ಹಾಕುವ ಮೂಲಕ ಜಾರಿ ಮಾಡುವುದರ ಕಾನೂನಿನ ಮಾನ್ಯತೆ ಬಗ್ಗೆ ವಿವರಣೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಗಲ್ಲು ಹಾಕುವುದನ್ನು ಪ್ರಶ್ನಿಸಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿರುವ ಅರ್ಜಿಯಲ್ಲಿ ‘ಮರಣದಂಡನೆಯನ್ನೂ ಗೌರವಯುತವಾಗಿ ಮತ್ತು ನೋವುಂಟು ಮಾಡದ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಹೇಳುತ್ತದೆ’ ಎಂದು ಪ್ರತಿಪಾದಿಸಿದ್ದರು.
ಅರ್ಜಿಯ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠವು ‘ಈ ಸಂಬಂಧ ಮೂರು ವಾರಗಳ ಒಳಗೆ ನಿಮ್ಮ ವಿವರಣೆ ನೀಡಿ’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.