ಶಿವಮೊಗ್ಗ: ‘ನಾನು ಪೊಲೀಸ್ ಅಧಿಕಾರಿ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗವಾಗಿದೆ. ಈಗ ನಾನೂ ಮೊದಲ ಬಾರಿ ರಾಜಕೀಯದಲ್ಲಿ ಪೊಲೀಸ್ ಪ್ರಯೋಗ ಮಾಡಲು ಸಿದ್ಧತೆ ನಡೆಸಿದ್ದೇನೆ. ನವೆಂಬರ್ 1ರಂದು ಅಧಿಕೃತವಾಗಿ ಹೊಸ ಪಕ್ಷ ಘೋಷಿಸುತ್ತೇನೆ’ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದರು.
ನಗರದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಮೂಡಬಿದಿರೆಗೆ ಭೇಟಿ ನೀಡಿದ್ದಾಗ ಹೊಸ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದೆ. ಕನ್ನಡ ರಾಜ್ಯೋತ್ಸವದ ದಿನವೇ ಬಳ್ಳಾರಿಯಲ್ಲಿ ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಉಳಿದೆಲ್ಲಾ ರಾಜಕೀಯ ಪಕ್ಷಗಳಿಗಿಂತ ಅದು ಭಿನ್ನವಾಗಿರುತ್ತದೆ’ ಎಂದರು.
‘ಸರ್ಕಾರಿ ಅಧಿಕಾರಿಗಳನ್ನು ರಾಜಕಾರಣ ಹೇಗೆ ಬಳಸಿಕೊಳ್ಳುತ್ತದೆ ಎನ್ನುವ ಸತ್ಯ ಗೊತ್ತಿದೆ. ಸ್ವತಃ ಅನುಭವಿಸಿದ್ದೇನೆ. ಅದಕ್ಕಾಗಿಯೇ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಪೊಲೀಸ್ ಶಕ್ತಿ ಬಳಸಿ ಭವಿಷ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಯಸಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಧಾರವಾಡದ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಅವರೂ ರಾಜಕೀಯ ಪಕ್ಷ ರಚಿಸುತ್ತಿದ್ದಾರೆ. ಅವರಂತೆ ನಮ್ಮ ಪಕ್ಷವೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಿದೆ. ಹಾಗಾಗಿ, ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸಲು ಬಯಸಿದರೆ ಸ್ವಾಗತಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.