ನವದೆಹಲಿ: ಭರವಸೆ ಹುಸಿಯಾಗಲಿಲ್ಲ. ನಾಯಕ ಇಶಾಂತ್ ಶರ್ಮಾ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದರು. ಚೊಚ್ಚಲ ಪಂದ್ಯ ಆಡಿದ ಎಡಗೈ ವೇಗಿ ಕುಲವಂತ್ ಖೇಜ್ರೋಲಿಯ ಕೂಡ ಮಿಂಚಿದರು.
ಇದರ ಪರಿಣಾಮ ದೆಹಲಿ ತಂಡ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದೆ. ಮೊದಲ ದಿನದಾಟದ ಮುಕ್ತಾಯಕ್ಕೆ ಈ ತಂಡ ಎದುರಾಳಿ ಅಸ್ಸಾಂ ತಂಡದ ಏಳು ವಿಕೆಟ್ಗಳನ್ನು ಕಬಳಿಸಿದೆ. ಅಸ್ಸಾಂ 224 ರನ್ ಗಳಿಸಿದೆ.
ಫಿರೋಜ್ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ದೆಹಲಿ ಎದುರಾಳಿ ತಂಡ 33 ರನ್ ಗಳಿಸುವಷ್ಟರಲ್ಲಿ ಮೊದಲ ಆಘಾತ ನೀಡಿತು. 44 ರನ್ ಗಳಿಸುವಷ್ಟರಲ್ಲಿ ಅಸ್ಸಾಂನ ಎರಡನೇ ವಿಕೆಟ್ ಕೂಡ ಪತನಗೊಂಡಿತು.
ನವದೀಪ್ ಸೈನಿ ಮತ್ತು ನಿತೀಶ್ ರಾಣ ದೆಹಲಿ ತಂಡಕ್ಕೆ ಆರಂಭಿಕ ಮೇಲುಗೈ ಗಳಿಸಿಕೊಟ್ಟರು. ನಂತರ ಇಶಾಂತ್ ಶರ್ಮಾ (31ಕ್ಕೆ3) ಮತ್ತು ಕುಲವಂತ್ (18ಕ್ಕೆ1) ದಾಳಿಗೆ ಅಸ್ಸಾಂ ತಂಡ ತತ್ತರಿಸಿತು.