ಬಳ್ಳಾರಿ: ‘ಮೊಬೈಲ್ ತಂತ್ರಜ್ಞಾನ ಮಾರಕವಾಗಿ ಬೆಳೆಯುತ್ತಿದೆ. ಸೆಲ್ಫಿ ಗೀಳಿನಿಂದ ಯುವ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸೆಲ್ಫಿ ಕಾನೂನು ಜಾರಿಗೆ ತರುವ ತುರ್ತು ಇದೆ’ ಎಂದು ಹಾಸ್ಯ ಮಾತುಗಾರ ಗಂಗಾವತಿ ಪ್ರಾಣೇಶ್ ಪ್ರತಿಪಾದಿಸಿದರು.
ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ‘ಅಂತರ ಮಹಾವಿದ್ಯಾಲಯ ಯುವಜನೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಫೇಸ್ ಬುಕ್, ಸೆಲ್ಫಿ ಮತ್ತು ವಾಟ್ಸ್ ಆಪ್ನಲ್ಲಿ ಯುವಜನ ಮುಳುಗಿಬಿಟ್ಟಿದ್ದಾರೆ. ಜಗತ್ತಿನ ಆಗುಹೋಗುಗಳ ಖಚಿತ ತಿಳಿವಳಿಕೆಯೇ ಅವರಲ್ಲಿ ಇಲ್ಲವಾಗಿದೆ’ ಎಂದು ವಿಷಾದಿಸಿದರು.
‘ವಿದ್ಯಾರ್ಥಿಗಳಲ್ಲಿ ಗುರಿಯ ಸ್ಪಷ್ಟತೆ ಇಲ್ಲ. ಹೀಗಾಗಿ ಶಿಕ್ಷಣದಲ್ಲಿ ಹಿನ್ನಡೆಯಾಗಿ ನೈತಿಕ ಮೌಲ್ಯ ಕುಸಿಯುತ್ತಿದೆ. ಹಣ ಹಾಗೂ ಅಧಿಕಾರ ದೊರೆತರೆ ಸಾಕು ಎನ್ನುವ ಭಾವನೆ ಬಹಳ ಮಂದಿಯಲ್ಲಿ ನೆಲೆಯೂರಿದೆ. ಹೀಗಾಗಿ ಅವರು ಕಲಿಕೆಯಲ್ಲಿ ಹಿಂದುಳಿದ್ದಾರೆ’ ಎಂದರು.
ವಿದ್ದವರಿಗೆ ಮಾತ್ರ ಉತ್ತಮ ಭವಿಷ್ಯ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಕಾಲೇಜುಗಳು ಒತ್ತು ನೀಡಬೇಕು’ ಎಂದರು.
‘ಶಾಲೆಯ ವಿದ್ಯಾಭ್ಯಾಸದಲ್ಲಿ ನಾನು ಹಿಂದೆ ಉಳಿದಿದ್ದೆ. ಆದರೆ, ಆಗ ಬೀಚಿ ಅವರ ಬರಹಗಳೆಂದರೆ ಅಚ್ಚುಮೆಚ್ಚಾಗಿತ್ತು. ಅವರ ಸಾಹಿತ್ಯದ ಓದಿನಿಂದ ನಾನು ಹಾಸ್ಯ ಮಾತುಗಾರಿಕೆಯನ್ನು ಕಲಿತೆ’ ಎಂದು ಸ್ಮರಿಸಿದರು.
ಕುಲಸಚಿವರಾದ ಪ್ರೊ.ಎಸ್.ಎ. ಪಾಟೀಲ್ ಮತ್ತು ಪ್ರೊ.ಹೊನ್ನು ಸಿದ್ಧಾರ್ಥ, ಸಿಂಡಿಕೇಟ್ ಸದಸ್ಯ ನಿಷ್ಠಿ ರುದ್ರಪ್ಪ, ವಿದ್ಯಾವಿಷಯಕ ಪರಿಷತ್ ಸದಸ್ಯ ವೆಂಕಟೇಶ್ ಡ್ಯಾಗಿ, ಯುವಜನೋತ್ಸವ ಸಂಯೋಜಕ ಪ್ರೊ.ಎನ್.ಶಾಂತನಾಯ್ಕ ಇದ್ದರು.
ವಿವಿಧ ಸ್ಪರ್ಧೆ: ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ 30 ಕಾಲೇಜಿನ 500 ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ದಿನ ಜಾನಪದ ಸಂಗೀತ, ಶಾಸ್ತ್ರೀಯ ನೃತ್ಯ, ಕನ್ನಡ ಭಾಷಣ ಸ್ಪರ್ಧೆ, ರಸಪ್ರಶ್ನೆ, ರಂಗೋಲಿ ಸ್ಪರ್ಧೆ, ಭಾವಗೀತೆ ಗಾಯನ, ಅನುಕರಣೆ, ಏಕವ್ಯಕ್ತಿ ಸ್ವರಗಾಯನ. ವೃಂದ ಗಾಯನ, ಪ್ರಹಸನ–ಮೂಕಾಭಿನಯ, ಇಂಗ್ಲಿಷ್ ಮತ್ತು ಕನ್ನಡ ಚರ್ಚಾಸ್ಪರ್ಧೆ ನಡೆಯಿತು.
ಎರಡನೇ ದಿನವಾದ ಶನಿವಾರ ಜಾನಪದ ಸಮೂಹ ನೃತ್ಯ, ಚಲನಚಿತ್ರ ಸಂಗೀತ, ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ, ಶಾಸ್ತ್ರೀಯ ವಾದ್ಯ ಸಂಗೀತ, ಮಣ್ಣಿನ ಆಕೃತಿ ಮತ್ತು ವ್ಯಂಗ್ಯ ಚಿತ್ರ ರಚನೆ ಸ್ಪರ್ಧೆಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.