ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.1ಕ್ಕೆ ಹೊಸ ಪಕ್ಷ ಘೋಷಣೆ: ಅನುಪಮಾ ಶೆಣೈ

Last Updated 7 ಅಕ್ಟೋಬರ್ 2017, 10:08 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನಾನು ಪೊಲೀಸ್ ಅಧಿಕಾರಿ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗವಾಗಿದೆ. ಈಗ ನಾನೂ ಮೊದಲ ಬಾರಿ ರಾಜಕೀಯದಲ್ಲಿ ಪೊಲೀಸ್ ಪ್ರಯೋಗ ಮಾಡಲು ಸಿದ್ಧತೆ ನಡೆಸಿದ್ದೇನೆ. ನವೆಂಬರ್ 1ರಂದು ಅಧಿಕೃತವಾಗಿ ಹೊಸ ಪಕ್ಷ ಘೋಷಿಸುತ್ತೇನೆ’ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದರು.

ನಗರದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಮೂಡಬಿದಿರೆಗೆ ಭೇಟಿ ನೀಡಿದ್ದಾಗ ಹೊಸ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದೆ. ಕನ್ನಡ ರಾಜ್ಯೋತ್ಸವದ ದಿನವೇ ಬಳ್ಳಾರಿಯಲ್ಲಿ ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಉಳಿದೆಲ್ಲಾ ರಾಜಕೀಯ ಪಕ್ಷಗಳಿಗಿಂತ ಅದು ಭಿನ್ನವಾಗಿರುತ್ತದೆ’ ಎಂದರು.

‘ಸರ್ಕಾರಿ ಅಧಿಕಾರಿಗಳನ್ನು ರಾಜಕಾರಣ ಹೇಗೆ ಬಳಸಿಕೊಳ್ಳುತ್ತದೆ ಎನ್ನುವ ಸತ್ಯ ಗೊತ್ತಿದೆ. ಸ್ವತಃ ಅನುಭವಿಸಿದ್ದೇನೆ. ಅದಕ್ಕಾಗಿಯೇ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಪೊಲೀಸ್ ಶಕ್ತಿ ಬಳಸಿ ಭವಿಷ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಯಸಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ತತ್ವ, ಸಿದ್ಧಾಂತ, ಸಂಹಿತೆ ಉತ್ತಮವಾಗಿದೆ. ಆದರೆ, ಯಾವ ಪಕ್ಷಗಳೂ ಅವುಗಳನ್ನು ಅನುಷ್ಠಾನಗೊಳಿಸಿಲ್ಲ. ಹೊಸ ಪಕ್ಷ ಸಂಹಿತೆಗೆ ಬದ್ಧವಾಗಿರುತ್ತದೆ. ಬಡ ಜನರಿಗೆ, ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ಕಲ್ಪಿಸುವುದೇ ಮುಖ್ಯ ಗುರಿ. ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸದೇ, ಸರ್ಕಾರಿ ನೌಕರರ ಸುಗಮ ಕಾರ್ಯಕ್ಕೆ ಅಡ್ಡಿಪಡಿಸುವ ಡೋಂಗಿ ರಾಜಕೀಯ ಪಕ್ಷಗಳ ವಿರುದ್ಧ ಮಾತ್ರ ಹೋರಾಟ ನಡೆಸಲಾಗುವುದು ಎಂದರು.

‘ಧಾರವಾಡದ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ ಅವರೂ ರಾಜಕೀಯ ಪಕ್ಷ ರಚಿಸುತ್ತಿದ್ದಾರೆ. ಅವರಂತೆ ನಮ್ಮ ಪಕ್ಷವೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಿದೆ. ಹಾಗಾಗಿ, ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸಲು ಬಯಸಿದರೆ ಸ್ವಾಗತಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT