ಬೆಂಗಳೂರು: ಮನೆ ಮನೆಗೆ ಕಾಂಗ್ರೆಸ್ ಅಭಿಯಾನದ ಪ್ರಗತಿಯನ್ನು ಖುದ್ದು ವೀಕ್ಷಿಸುವ ಮೂಲಕ ಈ ಅಭಿಯಾನದಲ್ಲಿ ಕೈ ಜೋಡಿಸದ ಶಾಸಕರು ಮತ್ತು ಪಕ್ಷದ ಮುಖಂಡರಿಗೆ ಬಿಸಿ ಮುಟ್ಟಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಿರ್ಧರಿಸಿದ್ದಾರೆ.
ಇದೇ 15ರಿಂದ ಮೂರು ದಿನ ಮತ್ತೆ ರಾಜ್ಯ ಪ್ರವಾಸ ಕೈಕೊಳ್ಳಲಿರುವ ಅವರು, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹುಬ್ಬಳ್ಳಿ–ಧಾರವಾಡದಲ್ಲಿ ಸುತ್ತಾಡಲಿದ್ದಾರೆ. ಈ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಗೆ ಅವರು ಭೇಟಿ ನೀಡಲು ಉದ್ದೇಶಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಕೈಗೊಂಡಿರುವ ಮನೆ ಮನೆಗೆ ಅಭಿಯಾನ ಯಶಸ್ವಿಯಾಗದ ಬಗ್ಗೆ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ವೇಣುಗೋಪಾಲ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಶಾಸಕರು ಮತ್ತು ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದ ಅವರು, ವಾರದೊಳಗೆ ವರದಿ ನೀಡುವಂತೆಯೂ ಸೂಚಿಸಿದ್ದರು.