ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಕುಂದನ್ ಶಾ ನಿಧನ

Last Updated 7 ಅಕ್ಟೋಬರ್ 2017, 20:00 IST
ಅಕ್ಷರ ಗಾತ್ರ

ಮುಂಬೈ: ‘ಜಾನೇ ಭಿ ದೋ ಯಾರೋ’ ಚಿತ್ರದಿಂದ ಹಿಂದಿ ಚಿತ್ರರಂಗದಲ್ಲಿ ಹೆಸರು ಗಳಿಸಿದ ನಿರ್ದೇಶಕ ಕುಂದನ್ ಶಾ (69) ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಸಂಜೆ ನಡೆಸಲಾಯಿತು.

ಕುಂದನ್ ಅವರು ಜನಿಸಿದ್ದು 1947 ಅಕ್ಟೋಬರ್ 19ರಂದು. ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ (ಎಫ್‌ಟಿಐಐ) ನಿರ್ದೇಶನ ತರಬೇತಿ ಪಡೆದರು. ‘ಜಾನೇ ಭಿ ದೋ ಯಾರೋ’ ಅವರ ನಿರ್ದೇಶನದ ಮೊದಲ ಚಿತ್ರ.

1983ರಲ್ಲಿ ತೆರೆಕಂಡ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಆದರೆ ಕಡು ಹಾಸ್ಯಭರಿತ ಈ ಚಿತ್ರವು ನಿರ್ದೇಶಕರ ಪ್ರಥಮ ಅತ್ಯುತ್ತಮ ಚಿತ್ರಕ್ಕಾಗಿ ನೀಡುವ ‘ಇಂದಿರಾ ಗಾಂಧಿ ರಾಷ್ಟ್ರ ಪ್ರಶಸ್ತಿ’ಯನ್ನು ಅವರಿಗೆ ತಂದು ಕೊಟ್ಟಿತು.

ರಾಷ್ಟ್ರ ಪ್ರಶಸ್ತಿ ಪ‍ಡೆದ ಕುಂದನ್ ಅವರು ನಂತರ ಹೊರಳಿದ್ದು ಟಿ.ವಿ ಕಡೆಗೆ. ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ‘ಕಾಮನ್ ಮ್ಯಾನ್’ ಆಧರಿತ ‘ವಾಗ್ಳೆ ಕಿ ದುನಿಯಾ’ ಸರಣಿ ನಿರ್ದೇಶನದ ನಂತರ ಸಿನಿಮಾ ನಿರ್ದೇಶನಕ್ಕೆ ಮರಳಿದರು.

ಬೆರಳೆಣಿಕೆಯ ಸಿನಿಮಾಗಳನ್ನಷ್ಟೇ ನಿರ್ದೇಶಿಸಿದ ಅವರು ಬರಹಗಾರರಾಗಿಯೂ ತಮ್ಮನ್ನು ತೊಡಗಿಸಿಕೊಂಡವರು. 2015ರಲ್ಲಿ ತೆರೆಕಂಡ ‘ಪಿ ಸೆ ಪಿಎಂ ತಕ್’ ಅವರ ನಿರ್ದೇಶನದ ಕೊನೆಯ ಸಿನಿಮಾ.

2015ರಲ್ಲಿ ಗಜೇಂದ್ರ ಚೌಹಾಣ್ ಅವರನ್ನು ಎಫ್‌ಟಿಐಐನ ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ಅಲ್ಲಿನ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ಶಾ ಅವರು ತಮಗೆ ಸಂದಿದ್ದ ಏಕೈಕ ರಾಷ್ಟ್ರ ಪ್ರಶಸ್ತಿಯನ್ನು ಹಿಂದಿರುಗಿಸಿ ಪ್ರತಿಭಟನೆಯನ್ನು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT