ನವದೆಹಲಿ: ಗುರುಗ್ರಾಮ ಮೂಲದ ಉದ್ಯಮಿ ಎಸ್.ಕೆ. ಆರ್ಯ ಹಾಗೂ ಅವರ ಒಡೆತನದ ಜೈ ಭಾರತ್ ಮಾರುತಿ (ಜೆಬಿಎಂ) ಸಮೂಹಕ್ಕೆ ಸೇರಿದ 30 ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ನಾನಗೃಹ ಹಾಗೂ ಹಾಸಿಗೆಯ ಅಡಿಯಲ್ಲಿ ₹ 7 ಕೋಟಿ ನಗದು ಮತ್ತು ಮೂರು ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿ, ಗುರುಗ್ರಾಮ ಹಾಗೂ ಉತ್ತರ ಭಾರತದ ಸುಮಾರು 30 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆರ್ಯ ಹಾಗೂ ಅವರ ಉದ್ಯಮ ತೆರಿಗೆ ಪಾವತಿಸಿಲ್ಲ ಎಂದು ಈ ಶೋಧಕಾರ್ಯ ನಡೆದಿದೆ.
‘ಜೆಬಿಎಂ ಸಮೂಹ ಹಾಗೂ ಅದರ ಕಾರ್ಯನಿರ್ವಾಹಕರು ಹಲವು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದು ಅದರ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಸಂಬಂಧ ವಿಚಾರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನೋದ್ಯಮದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಜೆಬಿಎಂ ಸಮೂಹವು ಅಧಿಕೃತ ಜಾಲತಾಣದಲ್ಲಿ ತನ್ನ ಆದಾಯ ₹ 7852 ಕೋಟಿ (120 ಕೋಟಿ ಡಾಲರ್) ಎಂದು ಘೋಷಿಸಿಕೊಂಡಿದೆ. ಸಮೂಹವು 18 ಸ್ಥಳಗಳಲ್ಲಿ 35 ತಯಾರಿಕಾ ಘಟಕಗಳು, 4 ಎಂಜಿನಿಯರಿಂಗ್ ಹಾಗೂ ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.