ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲ್ಲಾಳಿಗಳಿಗೆ ಬೈ ಹೇಳಿದ ಮಲ್ಲವ್ವ

Last Updated 8 ಅಕ್ಟೋಬರ್ 2017, 7:02 IST
ಅಕ್ಷರ ಗಾತ್ರ

ಕಷ್ಟಪಟ್ಟು ಸೊಪ್ಪು, ತರಕಾರಿ ಬೆಳೆದು, ಬೆಲೆ ಸಿಗದೇ ರಸ್ತೆಗೆ ಸುರಿಯುವ ರೈತರ ಪಾಡನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ, ಬೆಳೆದ ತರಕಾರಿಯನ್ನು ಸ್ವತಃ ಮಾರುಕಟ್ಟೆ ಮಾಡಿ ಯಶಸ್ಸು ಕಂಡವರು ರಾಣೆಬೆನ್ನೂರು ತಾಲ್ಲೂಕಿನ ಶ್ರೀನಿವಾಸಪುರ (ಗಂಗಾಜಲ ತಾಂಡೆ) ರೈತ ಮಹಿಳೆ ಮಲ್ಲವ್ವ ಲೋಕಪ್ಪ ಚವ್ಹಾಣ.

ಮಲ್ಲವ್ವ ಅವರ ಕುಟುಂಬ ಐದಾರು ವರ್ಷಗಳಿಂದ ತರಕಾರಿ ಬೆಳೆಯುತ್ತಿದೆ. ಬರ ಮತ್ತಿತರ ಸಮಸ್ಯೆಗಳಿಂದ ಬೆಳೆನಷ್ಟ ಅನುಭವಿಸಿದ ಅವರು, ಕೃಷಿ ಜೊತೆ ತರಕಾರಿ ಬೆಳೆಯಲು ಆರಂಭಿಸಿದ್ದರು. ಆದರೆ, ದರ ಕುಸಿತ ಮತ್ತಿತರ ಸಮಸ್ಯೆಗೆ ಸಿಲುಕಿ ತತ್ತರಿಸಿದರು. ಆಗ ಹುಟ್ಟಿದ ಆಲೋಚನೆಯೇ ಬದುಕಿಗೆ ಹೊಸ ದಿಕ್ಕು ತೋರಿಸಿತು.

ತಮ್ಮ ಜಮೀನಿನಲ್ಲಿ ಬೆಳೆಯುವ ತರಕಾರಿಯನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಿದರು. ಕೃಷಿ ಉತ್ಪನ್ನಗಳನ್ನು ಸ್ವತಃ ಮಾರುಕಟ್ಟೆಗೆ ಹೋಗಿ ಸ್ಪರ್ಧಾತ್ಮಕ ಬೆಲೆಗೆ ಮಾರಲು ಶುರು ಮಾಡಿದರು. ಈ ತಂತ್ರ ಫಲಿಸಿ, ಲಾಭ ನೇರವಾಗಿ ಮಲ್ಲವ್ವ ಅವರ ಕೈ ಸೇರಿತು

‘ಕಷ್ಟಪಟ್ಟು ಬೆಳೆದ ತರಕಾರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವುದರಿಂದ ನಷ್ಟವೇ ಹೆಚ್ಚು. ಏಜೆಂಟರು ಬಾಯಿಗೆ ಬಂದ ಬೆಲೆ ಕೇಳುತ್ತಾರೆ. ಮನೆಯವರೇ ಒಬ್ಬರು ಸಂತೆಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದೇವೆ. ಇದರಿಂದ ಉತ್ತಮ ಲಾಭ ಸಿಗುತ್ತಿದೆ’ ಎಂದು ಮಲ್ಲವ್ವ ಹೇಳುತ್ತಾರೆ.

‘ಒಟ್ಟು 5ಎಕರೆ ಜಮೀನು ಪೈಕಿ ಒಂದೂವರೆ ಎಕರೆಯಲ್ಲಿ ತರಕಾರಿ ಬೆಳೆಯುತ್ತೇವೆ. ಬೇಸಿಗೆಯಲ್ಲಿ ಕೊಳವೆಬಾವಿ ನೀರು ಬಳಸುತ್ತೇವೆ. ಮನೆಯವರೇ ಎಲ್ಲ ಕೆಲಸ ಮಾಡುತ್ತಿದ್ದು, ಕೂಲಿಗಳ ನೆರವು ಪಡೆಯುವುದಿಲ್ಲ. ವಾರದಲ್ಲಿ ಮೂರರಿಂದ ನಾಲ್ಕು ದಿನ ನಾವೇ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತೇವೆ. ಇನ್ನುಳಿದ ಸಮಯದಲ್ಲಿ ಹೊಲದಲ್ಲಿ ದುಡಿಯುತ್ತೇವೆ’ ಎನ್ನುತ್ತಾರೆ ಮಲ್ಲವ್ವ ದಂಪತಿ.

ಹಾಗಲಕಾಯಿ, ಮೂಲಂಗಿ, ಕೊತ್ತಂಬರಿ, ಮುಳಗಾಯಿ, ಚವಳಿಕಾಯಿ, ಸೌತೆಕಾಯಿ, ಹೀರೆಕಾಯಿ, ಅವರೆ, ಬೆಂಡಿಕಾಯಿ, ವಿವಿಧ ಸೊಪ್ಪುಗಳು, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ತಾವು ಬೆಳೆದ ಸೊಪ್ಪು, ತರಕಾರಿಗಳನ್ನು ಇವರು ಬೆಳೆಯುತ್ತಾರೆ.

‘ಮೊದಲು ನಾವೂ ತರಕಾರಿಗಳನ್ನು ಮಾರುಕಟ್ಟೆ ಹರಾಜಿಗೆ ಒಯ್ದು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದೆವು. 10 ಕೆ.ಜಿ.ಯ ತರಕಾರಿ ಬುಟ್ಟಿಗೆ ₹150 ರಿಂದ ₹200ಕ್ಕೆ ಸಿಗುತ್ತಿತ್ತು. ಮಧ್ಯವರ್ತಿಗಳು ಅದನ್ನು₹400ಕ್ಕೆ ಮರು ಮಾರಾಟ ಮಾಡಿ ಲಾಭ ಪಡೆಯುತ್ತಿದ್ದರು. ತರಕಾರಿ ಬೆಲೆ ಗಗನಕ್ಕೇರಿದರೂ ಬೆಳೆದ ನಮಗೆ ಲಾಭ ಸಿಗುತ್ತಿರಲಿಲ್ಲ.

ರೈತರ ಖರ್ಚು, ಶ್ರಮಕ್ಕೆ ಬೆಲೆ ಇರಲಿಲ್ಲ’ ಎನ್ನುತ್ತಾರೆ ಮಲ್ಲವ್ವ.ತಾಲ್ಲೂಕಿನ ಗೋವಿಂದ ಬಡಾವಣೆ, ಹುಣಸೀಕಟ್ಟಿ ತಾಂಡಾ, ಗಂಗಾಪುರ, ಕುಪ್ಪೇಲೂರ , ಮೆಡ್ಲೇರಿ, ರಾವುತನಕಟ್ಟಿ, ಅಂಕಸಾಪುರ, ಚಳಗೇರಿ, ಕರೂರು, ನಂದೀಹಳ್ಳಿ, ಲಿಂಗದಹಳ್ಳಿ, ಅಸುಂಡಿ, ಹೆಡಿಯಾಲ, ಹಲಗೇರಿ ಭಾಗದ ತರಕಾರಿ ಬೆಳೆಯುವ ರೈತರು ಇದೀಗ ಸ್ವತಃ ವ್ಯಾಪಾರಕ್ಕೂ ಇಳಿದಿದ್ದಾರೆ.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರೈತರು ದಲ್ಲಾಳಿಗಳನ್ನು ಅವಲಂಬಿಸಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಹೆಜ್ಜೆ ಇಡಬೇಕು’ ಎಂಬುದು ಅವರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT