ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಮೈದಾನ: ಅಭಿವೃದ್ಧಿಯ ತವಕ

Last Updated 8 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ನೆಹರೂ ಮೈದಾನ ಕೇವಲ ಆಟದ ಅಂಗಳವಾಗಿ ಉಳಿದಿಲ್ಲ. ಹಲವು ಚಟುವಟಿಕೆಗಳಿಗೆ ವೇದಿಕೆಯಾಗಿರುವ ಈ ಮೈದಾನ, ಶೋಚನೀಯ ಸ್ಥಿತಿ ತಲುಪಿದೆ. ಈ ಮೈದಾನವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ‘ಹುಡದಿ ಬಯಲು’ ಎಂದು ಕರೆಯಲಾಗುತ್ತಿತ್ತು. ‘ ಹುಡದಿ’ ಎಂಬುದು ಕಬಡ್ಡಿ ಆಟಕ್ಕೆ ಪರ್ಯಾಯ ಪದ. ಆದ್ದರಿಂದ ಹಿಂದಿನ ಕಾಲದಲ್ಲಿ ಈ ಸ್ಥಳ ಕಬಡ್ಡಿ ಆಡುವ ಬಯಲಾಗಿತ್ತು ಎಂಬುದನ್ನು ಈ ಹೆಸರೇ ಸೂಚಿಸುತ್ತದೆ.

1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಪಟ್ಟಣಕ್ಕೆ ಆಗಮಿಸಿದ್ದರು. ಆಗ ಅವರ ಕಾರ್ಯಕ್ರ ಮವನ್ನು ಇದೇ ಹುಡದಿ ಬಯಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ತಾಲ್ಲೂಕಿನ ಹಿರಿಯರಿಂದ ಲಭ್ಯವಾಗುತ್ತದೆ. ಆ ನಂತರ ‘ಹುಡದಿ ಬಯಲು’ ಬದಲಾಗಿ ನೆಹರೂ ಮೈದಾನ ಆಯಿತು ಎಂದು ಹೇಳಬಹುದು.

ತಾಲ್ಲೂಕಿನ ಹಲವು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ಈ ನೆಹರೂ ಮೈದಾನದ ಸುತ್ತ ಕನಿಷ್ಠ ಬೇಲಿಯನ್ನಾದರೂ ನಿರ್ಮಿಸುವವ ಕಾರ್ಯ ಇದುವರೆಗೆ ಆಗಿಲ್ಲ. ಈಗ ಕೆಲವು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಮೈದಾನಕ್ಕೆ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ ಮಾಡುತ್ತಿದೆ.

ಈ ಮೈದಾನದಲ್ಲಿ ಕ್ರಿಕೆಟ್ ಮತ್ತಿತರ ಆಟಗಳೊಂದಿಗೆ ನಾಟಕ, ಯಕ್ಷಗಾನ, ಸಭೆ, ಸಮಾರಂಭಗಳು ನಡೆಯುತ್ತವೆ. ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಅಂಗಡಿಗಳನ್ನು ಇಲ್ಲಿ ಹಾಕಲಾಗುತ್ತದೆ. ಅಲೆಮಾರಿಗಳ ಟೆಂಟ್‌ಗಳು ಆಗಾಗ ಇದೇ ಮೈದಾನದಲ್ಲಿ ಕಂಡುಬರು ತ್ತವೆ. ದನ–ಕರುಗಳು ಇಲ್ಲಿ ಮೇಯು ವುದಂತೂ ಮಾಮೂಲು ಸಂಗತಿ.

ಈ ಮೈದಾನದೊಳಗೆ ನೀರು ಹರಿಯುತ್ತದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂತು. ಇದರೊಂದಿಗೆ ಈ ಮೈದಾನದೊಳಗೆ ನೀರು ಹರಿಯಲು ಕಾರಣವಾದ ಸಂಗತಿಯ ಬಗ್ಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರಿಂದ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳೂ ಬಂದವು. ಈ ಮೂಲಕ ನೆಹರೂ ಮೈದಾನ ಹಾಳಾಗುತ್ತಿರುವ ಸಂಗತಿ ಮತ್ತೊಮ್ಮೆ ಎಲ್ಲರ ಗಮನಕ್ಕೂ ಬಂದಂತಾಯಿತು.

‘ಈ ಮೈದಾನಕ್ಕೆ ಮಾಡಲಾಗಿರುವ ಚರಂಡಿ ಸರಿಯಾಗಿ ಇದೆ. ನಾವು ಕಳೆದ ಹಲವು ವರ್ಷಗಳ ಈ ಮೈದಾನದ ಸುಧಾರಣೆಗೆ ಯೋಜನೆ ಹಾಗೂ ಅಂದಾಜು ಪಟ್ಟಿಯನ್ನು (ಸರ್ಕಾರಕ್ಕೆ) ಕಳುಹಿಸುತ್ತ ಬಂದಿದ್ದೇವೆ’ ಎಂದು ಪಟ್ಟಣ ಪಂಚಾಯ್ತಿ ಎಂಜಿನಿಯರ್ ರಮೇಶ ನಾಯ್ಕ ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT