ಮಡಿಕೇರಿ: ಅಲ್ಲಿ ನವಿಲು, ಆಮೆ, ಮೊಸಳೆ, ಚಿಟ್ಟೆ, ತಾಜ್ ಮಹಲ್, ಆನೆ, ಮನೆ, ಗಣಪತಿ... ಹೀಗೆ ಹತ್ತಾರು ಕಲಾಕೃತಿಗಳು ಮಣ್ಣಿನಲ್ಲಿ ಅರಳಿದ್ದವು. ಜತೆಗೆ, ಛದ್ಮವೇಷದಲ್ಲಿ ಮಕ್ಕಳು ಸಂಭ್ರಮಿಸಿದರು.
ಈ ದೃಶ್ಯ ಕಂಡುಬಂದಿದ್ದು ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ...
ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡ ಮಕ್ಕಳವರೆಗೂ ಕೃಷ್ಣನ ವೇಷ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಜೋಕರ್, ರಾವಣ, ವೆಂಕಟರಮಣ, ಭೂತದ ಕೋಲ, ಶಿಲಾಬಾಲಿಕೆ, ಏಕಲವ್ಯ ವೇಷಗಳನ್ನು ತೊಟ್ಟು ರಂಜಿಸಿದರು.
ಹಿಂದಿ, ಇಂಗ್ಲಿಷ್, ಕನ್ನಡ ಕಂಠಪಾಠ, ಕೋಲಾಟ, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ, ಛದ್ಮವೇಷ, ನಾಟಕ, ದೃಶ್ಯ ಕಲೆ, ಆಶುಭಾಷಣ ಸ್ಪರ್ಧೆ, ಧಾರ್ಮಿಕ ಪಠಣ, ಕ್ಲೇ ಮಾಡಲಿಂಗ್, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ಆಯೋಜಿಸಲಾಗಿತ್ತು.
ಜಿಲ್ಲಾ ಯೋಜನಾ ಸಮನ್ವಯಾ ಧಿಕಾರಿ ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರಹಾಕುವಲ್ಲಿ ಅವಕಾಶಗಳನ್ನು ಪಡೆಯುವುದು ಉತ್ತಮ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಮಾತನಾಡಿ, ‘ವೈಯಕ್ತಿಕ ಹಾಗೂ ಸಾಮೂಹಿಕ ಕಾರ್ಯಕ್ರಮಗಳಿದ್ದು ವಿದ್ಯಾರ್ಥಿಗಳು ತಾವು ಸಂತಸ ಪಡುವುದರೊಂದಿಗೆ ಬೇರೆ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಿ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಪಿ.ಎಸ್. ಜರ್ನಾದನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಮೆಹಬೂಬ್ ಸಾಬ್, ಪ್ರಮುಖರಾದ ಮೃತ್ಯುಂಜಯ, ನಾಗಯ್ಯಶೆಟ್ಟಿ, ಮಹದೇವ್ ಹಾಜರಿದ್ದರು.