ಮೈಸೂರು: ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್.ವಿಜಯಶಂಕರ್ ಅವರು ಪಕ್ಷ ತೊರೆ ಯಲು ಮುಂದಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರೊಂದಿಗೆ ಕುಳಿತು ಗಹನ ಚರ್ಚೆಯಲ್ಲಿ ತೊಡಗಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತಾಲ್ಲೂಕಿನ ಟಿ.ಕಾಟೂರಿನಲ್ಲಿರುವ ಮುಖ್ಯಮಂತ್ರಿಯ ತೋಟದ ಮನೆಯ ಆವರಣದಲ್ಲಿ ಕುಳಿತು ಮಾತುಕತೆ ನಡೆಸುತ್ತಿರುವ ಚಿತ್ರ ಕುತೂಹಲ ಕೆರಳಿಸಿದೆ. ‘ತೋಟದ ಮನೆಗೆ ಇತ್ತೀಚೆಗೆ ವಿಜಯಶಂಕರ್ ಭೇಟಿ ನೀಡಿಲ್ಲ. ಈ ವಿಚಾರದಲ್ಲಿ ನಾನು ಸುಳ್ಳು ಹೇಳುವುದಿಲ್ಲ. ಹಿರಿಯ ಪುತ್ರ ರಾಕೇಶ್ ಪುಣ್ಯತಿಥಿಗೆ ಟಿ.ಕಾಟೂರಿಗೆ ಬಂದಿದ್ದರು.
ಆಗ ತೆಗೆದ ಚಿತ್ರ ಇರಬಹುದು. ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ’ ಎಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ವಿಜಯಶಂಕರ್ ಶನಿವಾರ ಬೆಳಿಗ್ಗೆ ದೇವೇಗೌಡನಹುಂಡಿಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರ ಸಹೋದರಿ ಚಿಕ್ಕಮ್ಮ ಅವರ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಬರುವುದಕ್ಕೂ ಮುನ್ನವೇ ಅಲ್ಲಿಂದ ತೆರಳಿದರು.
‘ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವೆ 40 ವರ್ಷಗಳ ಬಾಂಧವ್ಯ ಇದೆ. ರಾಜಕೀಯದಲ್ಲಿ 1978ರಿಂದ ಇಬ್ಬರೂ ಜೊತೆಗೆ ಬೆಳೆದಿದ್ದೇವೆ. ಹೀಗಾಗಿ, ಚಿಕ್ಕಮ್ಮ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದು ವಿಜಯಶಂಕರ್ ಸುದ್ದಿಗಾರರಿಗೆ ತಿಳಿಸಿದರು.