ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವ್ರು ಹೇಳೊದೊಂದು ಮಾಡೋದೊಂದು’

Last Updated 8 ಅಕ್ಟೋಬರ್ 2017, 10:11 IST
ಅಕ್ಷರ ಗಾತ್ರ

ವಿಜಯಪುರ: ‘ಇಂದಿನ ಕಮ್ಯುನಿಸ್ಟರ ಹಾದಿ ಬೇರೆಯೇ ಆಗಿದೆ. ಅವರು ರಾಜಕೀಯಕರಣಗೊಂಡಿದ್ದಾರೆ. ಹೇಳುವುದೇ ಒಂದು ಮಾಡುವುದೇ ಮತ್ತೊಂದಾಗಿದೆ’ ಎಂದು ಕೇರಳದ ಸಾಮಾಜಿಕ ಕಾರ್ಯಕರ್ತ ಬನೀಶ ಕಣ್ಣೂರ ಹೇಳಿದರು. ನಗರದಲ್ಲಿ ಮಂಥನದ ಚಿಂತಕರ ಚಾವಡಿ ಈಚೆಗೆ ಆಯೋಜಿಸಿದ್ದ ‘ಕಣ್ಣೂರಿನ ಕಣ್ಣೀರ ಕಥೆ–ಕಮ್ಯುನಿಸ್ಟರು ನಡೆಸಿದ ಮಾರಣ ಹೋಮಗಳವಾಸ್ತವ ಕಥನ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಯಾರು ಕಮ್ಯುನಿಸ್ಟ್‌ ಪಕ್ಷವನ್ನು ವಿರೋಧಿಸುತ್ತಾರೋ, ಅಂತಹ ಅಂದಾಜು 10 ಕೋಟಿ ಜನರನ್ನು ಪ್ರಪಂಚದಾದ್ಯಂತ ಇಲ್ಲಿಯವರೆಗೆ ಕೊಲ್ಲಲಾಗಿದೆ’ ಎಂದರು.
‘ಕಮ್ಯುನಿಸ್ಟರು ಕೊಲೆಗಡುಕತನ ಒಪ್ಪಿಕೊಂಡು ಬಾಳುತ್ತಿರುವುದು ದುರಂತ. ಅಂಥದರಲ್ಲಿ ಹಿಂದೂಗಳನ್ನು, ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಅವರು ಕ್ರೇಂದ್ರೀಕೃತಗೊಳಿಸಿಕೊಂಡಿರುವುದು ಇನ್ನೂ ದುರಂತ’ ಎಂದು ಅವರು ಹೇಳಿದರು.

‘ಕೇರಳದ ಕಣ್ಣೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಾಜು 72 ಕಾರ್ಯಕರ್ತರನ್ನು ಈವರೆಗೆ ಹತ್ಯೆ ಮಾಡಲಾಗಿದ್ದರೂ, ಸಂಘದ ಕಾರ್ಯಕರ್ತರು ಮಾತ್ರ ಎದೆಗುಂದದೆ, ದೇಶವೇ ಮೆಚ್ಚುವಂತಹ ಜನಪರ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

‘ಯಾರೋ ಬಂದು ಯಾವುದೇ ವ್ಯಕ್ತಿಯನ್ನು ಕೊಲ್ಲಬಹುದೇ ವಿನಾಃ ಅವರ ವಿಚಾರಧಾರೆಗಳನ್ನಲ್ಲ. ಕೇರಳದಲ್ಲಿ, ಕಣ್ಣೂರಿನಲ್ಲಿ ಭಯದ ವಾತಾವರಣವಿದ್ದರೂ ಸಂಘದ ಕಾರ್ಯಕರ್ತರು ಎದೆಗುಂದದೆ ತಮ್ಮ ತಮ್ಮ ಕೌಟುಂಬಿಕ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಒಬ್ಬೊಬ್ಬರ ಮೇಲೂ ಸಾಕಷ್ಟು ಸುಳ್ಳು ಕೇಸುಗಳಿದ್ದರೂ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೇಷ್ಠವಾದ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವುದು ಅವರ ಆತ್ಮ ವಿಶ್ವಾಸವನ್ನು ತೋರಿಸುತ್ತದೆ’ ಎಂದರು.

‘ಒಂದೇ ದೇಶ, ಅಭಿವೃದ್ಧಿ ದೇಶ ಭಾರತ’ ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಂಘದ ಕಾರ್ಯಕ್ರಮಗಳು ಯಾವಾಗಲೂ ವಿಶೇಷವಾಗಿರುತ್ತವೆ. ರಾಷ್ಟ್ರಪ್ರೇಮ, ದೇಶೀಯತೆ, ಸ್ವದೇಶಿ ಪರಿಕಲ್ಪನೆ ಮುಂತಾದ ಸಂಸ್ಕಾರ, ಸಂಸ್ಕೃತಿಗಳನ್ನು ಅನಾವರಣ ಮಾಡುವ, ವಿಶ್ವ ಭ್ರಾತೃತ್ವ, ಸಹೋದರತೆಯನ್ನು ಸಾರುವುದು, ಹಿಂದುತ್ವಕ್ಕೆ ಬದ್ಧತೆ ತೋರುವುದನ್ನು ಸಂಘದ ಶ್ರೇಷ್ಠತೆ ಹೇಳುತ್ತದೆ.

ಕೇರಳದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದು, ರಾಜಕೀಯ ಏರಿಳಿತಗಳನ್ನು ನಿರ್ವಹಿಸುವಷ್ಟು ವೋಟ್ ಬ್ಯಾಂಕ್ ಹೊಂದಿದ್ದಾರೆ. ಅಲ್ಲಿನ ಬಹುತೇಕ ಶಿಕ್ಷಣ ಸಂಸ್ಥೆಗಳು, ಶಾಲಾ–ಕಾಲೇಜುಗಳು ಅವರ ಒಡೆತನದಲ್ಲಿವೆ’ ಎಂದು ತಿಳಿಸಿದರು.

‘ಕೇರಳದ ಕಣ್ಣೂರಿನಲ್ಲಿ ಸಂಘದ ಅಮಾಯಕ ಕಾರ್ಯಕರ್ತರು ತಮ್ಮದಲ್ಲದ ತಪ್ಪಿಗೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸರ್ಕಾರ ಅವರನ್ನು ಹಣಿಯುವ ಕಾರ್ಯ ಮಾಡಿದಷ್ಟು ಸಂಘದ ಕಾರ್ಯಕರ್ತರು ಹೆಚ್ಚೆಚ್ಚು ತಮ್ಮ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜಪರ ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಸಂಘ ಚಾಲಕ ಡಾ.ಸತೀಶ ಜಿಗಜಿನ್ನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT