ಚಿತ್ತಾಪುರ: ತಾಲ್ಲೂಕಿನ ಡೋಣಗಾಂವ ಗ್ರಾಮದ ಹಾಗೂ ಸೇಡಂ ತಾಲ್ಲೂಕಿನ ವ್ಯಾಪ್ತಿಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದರಿಂದ ಡೋಣಗಾಂವ - ಕೋಡ್ಲಾ ಗ್ರಾಮಗಳನ್ನು ಸಂಪರ್ಕಿಸುವ ಕಿರುಸೇತುವೆ ರಸ್ತೆ ಮಳೆ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
ಗ್ರಾಮದ ಸೀಮೆಯ ಬಳಿ ಹರಿಯುವ ಚಿಕ್ಕ ನಾಲಾಕ್ಕೆ ಅಡ್ಡಲಾಗಿ ಕಿರುಸೇತುವೆ ನಿರ್ಮಾಣ ಮಾಡಿ ಡಾಂಬರ್ ರಸ್ತೆ ನಿರ್ಮಿಸಲಾಗಿತ್ತು. ನಾಲಾದಲ್ಲಿ ಉಕ್ಕಿ ಬಂದ ಭಾರಿ ಪ್ರವಾಹದ ರಭಸಕ್ಕೆ ಡಾಂಬರ್ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಇದರಿಂದ ಡೋಣಗಾಂವ - ಕೋಡ್ಲಾ ಗ್ರಾಮಗಳ ಸಂಚಾರ ಬಂದ್ ಆಗಿದೆ.
ಗ್ರಾಮದ ಜನರು, ರೈತರು ದೈನಂದಿನ ಜೀವನಕ್ಕೆ ಬೇಕಾದ ಸಾಮಾನು ಖರೀದಿಸಲು ಕೋಡ್ಲಾ ಮತ್ತು ಸೇಡಂ ಪಟ್ಟಣಕ್ಕೆ ಹೋಗಿ ಬರಲು ಇದೇ ರಸ್ತೆ ಮೂಲಕ ಸಂಚಾರಿಸುತ್ತಿದ್ದರು. ಈಗ ರಸ್ತೆ ಹಾನಿಯಾಗಿದ್ದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳಿಂದ ಕೇವಲ ಎತ್ತಿನ ಬಂಡಿ ಹೋಗಿ ಬರುವ ದಾರಿ ಮಾತ್ರ ಇತ್ತು. ಡಾಂಬರ್ ರಸ್ತೆ ನಿರ್ಮಿಸಬೇಕೆಂದು ಶಾಸಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮಸ್ಥರು ಕೋರಿಕೊಂಡಿದ್ದೆವು. ಮನವಿಗೆ ಸ್ಪಂದಿಸಿದ ಸಚಿವರು ಒದಗಿಸಿದ ಅನುದಾನದಿಂದ ಗ್ರಾಮದಿಂದ ತಾಲ್ಲೂಕಿನ ಗಡಿಯವರೆಗೆ ಡಾಂಬರು ರಸ್ತೆ ನಿರ್ಮಾಣ ಮಾಡಲಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕಳಪೆ ಕಾಮಗಾರಿ ಆರೋಪ: ಕಳೆದ ಬೇಸಿಗೆಯಲ್ಲಿ ಸೇತುವೆ ಬಳಿ ₹5 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಆರು ತಿಂಗಳಲ್ಲೆ ರಸ್ತೆ ಕೊಚ್ಚಿ ಹೋಗಿದೆ ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಕಾಶಪ್ಪ ಹಲಕರ್ಟಿ ಆರೋಪಿಸಿದ್ದಾರೆ.