ಮಹಾಲಿಂಗಪುರ: 'ಗ್ರಾಮೀಣ ಬದುಕಿನಲ್ಲಿ ಕೆರೆಗಳಿಗೆ ಮಹತ್ವದ ಸ್ಥಾನವಿದೆ. ಕೆರೆಗಳಿದ್ದಲ್ಲಿ ಸಂಸ್ಕೃತಿ ಇದೆ, ಫಲವತ್ತತೆ ಇದೆ ಹಾಗೂ ಸಮೃದ್ಧತೆ ಇದೆ' ಎಂದು ಸಚಿವೆ ಉಮಾಶ್ರೀ ಹೇಳಿದರು. ಸಮೀಪದ ಚಿಮ್ಮಡ ಗ್ರಾಮದಲ್ಲಿ ಕೆರೆ ಸುಧಾರಣೆ ಕಾಮಗಾರಿಯ 2016-17ನೇ ಸಾಲಿನ ಕೆರೆಗಳ ಆಧುನೀಕರಣ ಪ್ರಧಾನ ಕಾಮಗಾರಿ ಯೋಜನೆಯಡಿ ಮಂಜೂರಾದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಚಿಮ್ಮಡದ ಕೆರೆ ಜನರ ನಿರಾಸಕ್ತಿಯಿಂದ ನಿರುಪಯುಕ್ತ ಕೆರೆಯಾಗಿದೆ. ಕೆರೆ ಮಾಡಲು ಹಲವು ತಾಂತ್ರಿಕ ತೊಂದರೆ ನಿವಾರಣೆಯಾಗಬೇಕಾಗಿದೆ ಎಂದು ವಿವರ ನೀಡಿದರು.
ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ ‘ಹೆಚ್ಚು ರೈತರು ವಾಸ ಮಾಡುವ ಪ್ರದೇಶವಾಗಿರುವುದರಿಂದ ಪ್ರತಿಸಲ ಬರಗಾಲದಲ್ಲೂ ತೀವ್ರ ತೊಂದರೆಯಾಗುತ್ತಿತ್ತು. ಕೆರೆಯನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.