ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಕೊರತೆಯಲ್ಲೂ ಉತ್ತಮ ನವಣಿ ಇಳುವರಿ

Last Updated 9 ಅಕ್ಟೋಬರ್ 2017, 7:01 IST
ಅಕ್ಷರ ಗಾತ್ರ

ಹನುಮಸಾಗರ: ‘ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿತ್ತನೆಯಾಗಿದ್ದ ನವಣಿ ಬೆಳೆ ಮಾತ್ರ ಉತ್ತಮ ಇಳುವರಿ ಬಂದಿದ್ದು, ರೈತರು ಸಂತಸದಲ್ಲಿದ್ದಾರೆ’ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಎಮ್‌.ಬಿ.ಪಾಟೀಲ ಹೇಳಿದರು.

ಸಮೀಪದ ಮಾಲಗಿತ್ತಿ ಗ್ರಾಮದ ಸೋಮಪ್ಪ ತೆವರನ್ನವರ ಅವರ ಜಮೀನಿನಲ್ಲಿ ಈಚೆಗೆ ನಡೆದ ನವಣೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಒಟ್ಟು 7,626 ಎಕರೆ ಪ್ರದೇಶದಲ್ಲಿ ನವಣೆ ಬಿತ್ತನೆಯಾಗಿದೆ.

ಇದರಲ್ಲಿ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದಿಂದ ನೂರು ಎಕರೆ ನವಣಿ ಬೆಳೆಯಲಾಗುತ್ತಿದ್ದು, ಮಾಲಗಿತ್ತಿ ಗ್ರಾಮದಲ್ಲಿ ಜಿಲ್ಲಾ ಕೃಷಿ ಸಂಶೋಧನಾ ಕೇಂದ್ರದಿಂದ ಆಸಕ್ತ ರೈತರಿಗಾಗಿ ವಿತರಿಸಲಾಗಿದ್ದ ಡಿಎಚ್‌ಎಫ್‌ಟಿ–109–3 ತಳಿಯನ್ನು ಸುಮಾರು 50 ಎಕರೆಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕಡಿಮೆ ತೇವಾಂಶದಲ್ಲಿಯೇ ಇಳುವರಿ ಕೊಡುವ ಬರ ನಿರೋಧಕ ಬೆಳೆಯಿಂದ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ’ ಎಂದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ‘ನವಣೆ ಒಂದು ಸತ್ವಯುತ ಕಿರುಧಾನ್ಯವಾಗಿದ್ದು, ಇದು ಮೂರು ತಿಂಗಳಲ್ಲಿ ಬರುವ ಅಲ್ಪಾವಧಿ ಬೆಳೆಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಆಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯವಾಗಿದೆ. ಇದಕ್ಕೆ ರಸಗೊಬ್ಬರ ಅಗತ್ಯವೂ ಕಡಿಮೆಯಾಗಿದ್ದು, ಕೊಟ್ಟಿಗೆ ಗೊಬ್ಬರದಲ್ಲಿಯೇ ಬೆಳೆಯುತ್ತದೆ ಎಂಬುದಕ್ಕೆ ಈ ಬಾರಿ ಭರಪೂರ ಪ್ರಮಾಣದಲ್ಲಿ ನವಣಿ ಇಳುವರಿ ಬಂದಿದ್ದೆ ಸಾಕ್ಷಿ’ ಎಂದರು.

ರೈತ ಸೋಮಪ್ಪ ತೆವರನ್ನವರ ಮಾತನಾಡಿ, ‘ಮೆಕ್ಕೆಜೋಳದ ಬೆಳೆಯ ಬದಲು ಎರಡೂವರೆ ಎಕರೆಯಲ್ಲಿ ಬಿತ್ತನೆ ಮಾಡಲಾಗಿದ್ದ ನವಣೆ ಸುಮಾರು 11ಕ್ವಿಂಟಲ್‌ ಇಳುವರಿ ಬರುವ ಸಾಧ್ಯತೆ ಇದೆ. ಅಲ್ಲದೆ ನವಣೆಯ ಜತೆಗೆ ಸಾವೆ, ಕೂರ್ಲೆ, ಹಾರ್ಕಗಳಂತಹ ಸಿರಿಧಾನ್ಯಗಳು ಉತ್ತಮವಾಗಿ ಬೆಳೆದಿವೆ’ ಎಂದು ಸಂತಸ ಹಂಚಿಕೊಂಡರು.

ಕೃಷಿ ಅಧಿಕಾರಿ ಶಿವಾನಂದ ಮಾಳಗಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಜಿಲ್ಲಾ ಸಂಚಾಲಕ ಎಸ್‌.ಬಿ.ಕೋಣಿ, ತಾಲ್ಲೂಕು ಸಂಚಾಲಕ ಸದಸ್ಯ ರಾವುಸಾಹೇಬ್‌ ದೇಸಾಯಿ, ಪ್ರಮುಖರಾದ ದೇವೇಂದ್ರಪ್ಪ ತಳ್ಳಿಹಾಳ, ಸಂಗಮೇಶ ಅಂಗಡಿ, ಅನುವುಗಾರ ಚಿನ್ನಪ್ಪ ಗುಜಮಾಗಡಿ, ಕೆಂಚಪ್ಪ ವಡ್ಡರ, ಹೊನಕೇರಪ್ಪ ಬಸಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT