ಶ್ರೀರಂಗಪಟ್ಟಣ: ಧಾರಾಕಾರ ಮಳೆಗೆ ಭಾಗಶಃ ಕೊಚ್ಚಿ ಹೋಗಿದ್ದ ಇಲ್ಲಿಗೆ ಸಮೀಪದ ಗಂಜಾಂ– ದೊಡ್ಡ ಗೋಸಾಯಿಘಾಟ್ ಸಂಪರ್ಕ ರಸ್ತೆಯನ್ನು ಸ್ಥಳೀಯರೇ ಭಾನುವಾರ ದುರಸ್ತಿ ಮಾಡಿದರು.
ಕಾವೇರಿ ಸಂಗಮ ರಸ್ತೆಯಿಂದ ಚಿಕ್ಕ ಗೋಸಾಯಿಘಾಟ್ ತಿರುವವರೆಗೆ ಮತ್ತು ದೊಡ್ಡ ಗೋಸಾಯಿಘಾಟ್ ತಲುಪುವರೆಗೆ ವಿವಿಧೆಡೆ ರಸ್ತೆ ಮುಚ್ಚಿ ಹೋಗಿತ್ತು. ರಸ್ತೆ ಪಕ್ಕದ ಬಸಿಗಾಲುವೆಗಳು ಇಲ್ಲದಂತಾಗಿದ್ದವು.
ಇದರಿಂದ ಅಪಾರ ಪ್ರಮಾಣದ ನೀರು ರಸ್ತೆಗೆ ಹರಿದು ರಸ್ತೆ ಗುಂಡಿ ಬಿದ್ದಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳೀಯರಾದ ಕೆ. ನಾರಾಯಣ ಇತರರು ಒಗ್ಗೂಡಿ ರಸ್ತೆಗೆ ಹರಿಯುತ್ತಿದ್ದ ನೀರು ತಡೆದರು. ಮಣ್ಣಿನ ರಾಶಿಯನ್ನು ತೆಗೆದು ಗುಂಡಿಗಳನ್ನು ಮುಚ್ಚಿದರು.
ಕೋಡಿಶೆಟ್ಟಿಪುರ: ಗ್ರಾಮದಿಂದ ಸಿದ್ದಾಪುರಕ್ಕೆ ತೆರಳುವ ಮಣ್ಣಿನ ರಸ್ತೆ ಮಳೆಗೆ ಕೊರೆದು ಹೋಗಿತ್ತು. ಪಾದಚಾರಿಗಳು ನಡೆದಾಡಲೂ ಆಗದಂತೆ ಅವ್ಯವಸ್ಥೆ ಉಂಟಾಗಿತ್ತು. ರಸ್ತೆಯಲ್ಲಿ ನೀರು ಜಿನುಗುತ್ತಿತ್ತು. ಗ್ರಾಮಸ್ಥರು ಹಣ ಸಂಗ್ರಹಿಸಿ ಜೆಸಿಬಿ ಯಂತ್ರ ತರಿಸಿ ರಸ್ತೆಯ ಇಕ್ಕೆಲಗಳನ್ನು ಟ್ರೆಂಚ್ ತೆಗೆದು ಮಳೆ ನೀರು ಹರಿದು ಹೋಗುವಂತೆ ಮಾಡಿದರು. ಗುಂಡಿ ಬಿದ್ದಿದ್ದ ರಸ್ತೆಗೆ ಗ್ರಾವಲ್ ಮಣ್ಣು ಸುರಿದು ಸಮತಟ್ಟು ಮಾಡಿ ದುರಸ್ತಿ ಮಾಡಿದ್ದಾರೆ.