ತುಮಕೂರು: ‘ದೇವೇಗೌಡರು ನನ್ನ ರಾಜಕೀಯ ಗುರುಗಳು; ಅವರು ನನ್ನ ಬಗ್ಗೆ ಏನಾದರೂ ಮಾತನಾಡಲಿ. ಆದರೆ ಶಾಸಕ ಎಚ್.ಡಿ.ರೇವಣ್ಣ ನನ್ನ ವಿರುದ್ಧ ಮಾತನಾಡಿದರೆ ಅವರ ಬಂಡವಾಳವನ್ನು ಬಿಚ್ಚುತ್ತೇನೆ’ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಖಾನ್ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು, ದೇವರಾಜು ಅವರಿಗೆ ಟೋಪಿ ಹಾಕಿರುವುದಾಗಿ ರೇವಣ್ಣ ಹೇಳಿದ್ದಾರೆ. ನಾನು ಇಲ್ಲಿಯವರೆಗೂ ಯಾರಿಗೂ ಟೋಪಿ ಹಾಕಿಲ್ಲ. ಆದರೆ ರೇವಣ್ಣ ತನ್ನ ಸ್ವಂತ ತಮ್ಮ ಕುಮಾರಸ್ವಾಮಿ ಅವರಿಗೇನೆ ಟೋಪಿ ಹಾಕಿದ್ದಾರೆ’ ಎಂದು ಟೀಕಿಸಿದರು.
‘ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯ ವೇಳೆ ಅಡ್ಡಗಾಲು ಹಾಕಿದರು. ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೆ ದೇವೇಗೌಡರು ವಿಷ ಕುಡಿದು ಸಾಯುತ್ತಾರೆ ಎಂದು ಬ್ಲಾಕ್ ಮೇಲ್ ಮಾಡಿದರು. ಸರ್ಕಾರ ರಚನೆ ನಂತರ ದೇವೇಗೌಡರಿಗೆ ಟೋಪಿ ಹಾಕಿ ಮೂರು ಖಾತೆಗಳಿಗೆ ರೇವಣ್ಣ ಸಚಿವರಾದರು’ ಎಂದು ವ್ಯಂಗ್ಯವಾಡಿದರು.
‘ಜಮೀರ್ ಎಂದಿಗೂ ಭಯ ಬೀಳುವುದಿಲ್ಲ. ರೇವಣ್ಣ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಅವರಿಗೆ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಲಿ. ಅದಕ್ಕೆ ಮೀಟರ್ ಬೇಕು’ ಎಂದು ಏಕವಚನದಲ್ಲಿ ಹರಿಹಾಯ್ದರು.
‘ಜೆಡಿಎಸ್ ಒಂದು ಕೆರೆ ಇದ್ದಂತೆ. ಈಗ ನಾನು ಕಾಂಗ್ರೆಸ್ ಎನ್ನುವ ಸಮುದ್ರ ಸೇರಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರೇ ನನ್ನನ್ನು ಗುರುತಿಸಿದ್ದಾರೆ’ ಎಂದು ಹೇಳಿದರು.