ಬೆಂಗಳೂರು: ಹೈಕೋರ್ಟ್ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಸೋಮವಾರ ನಿವೃತ್ತರಾದ ಸುಬ್ರೊ ಕಮಲ್ ಮುಖರ್ಜಿ ಅವರಿಗೆ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘ ಬೀಳ್ಕೊಡುಗೆ ನೀಡಲಿಲ್ಲ.
ನಿವೃತ್ತರಾಗುವ ಯಾವುದೇ ನ್ಯಾಯಮೂರ್ತಿಗೆ ವಕೀಲರ ಪರಿಷತ್ ವತಿಯಿಂದ ಕೋರ್ಟ್ ಹಾಲ್ ಸಂಖ್ಯೆ 1ರಲ್ಲಿ ಅಧಿಕೃತವಾಗಿ, ಹೊರಗೆ ವಕೀಲರ ಸಂಘದ ವತಿಯಿಂದ ಔಪಚಾರಿಕ ಬೀಳ್ಕೊಡುಗೆ ಕೊಡುವುದು ವಾಡಿಕೆ.
‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನುಕೂಲಕರ ತೀರ್ಪು ಪಡೆಯಲು ಮುಖರ್ಜಿ ಮನೆಗೆ ವ್ಯಕ್ತಿಯೊಬ್ಬರು ಭೇಟಿ ನೀಡಿ ಲಂಚದ ಆಮಿಷ ಒಡ್ಡಿ, ವಿಸಿಟಿಂಗ್ ಕಾರ್ಡ್ ನೀಡಿ ಹೋಗಿದ್ದ’ ಎಂಬ ಪ್ರಕರಣ ಹಲವು ಆಕ್ಷೇಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು.
ಈ ಬೆಳವಣಿಗೆ ನಂತರ ವಕೀಲರ ಸಂಘವು ಮುಖರ್ಜಿ ವರ್ಗಾವಣೆಗೆ ನಿರ್ಣಯ ಸ್ವೀಕರಿಸಿತ್ತು. ಅಂತೆಯೇ ಪರಿಷತ್ ಕೂಡಾ ‘ಮುಖರ್ಜಿ ನೇತೃತ್ವ
ದಲ್ಲಿ ರಾಜ್ಯ ನ್ಯಾಯಾಂಗದ ಆಡಳಿತ ವ್ಯವಸ್ಥೆ ಕುಸಿದಿದೆ. ಅದಕ್ಕಾಗಿಯೇ ಅವರಿಗೆ ಬೀಳ್ಕೊಡುಗೆ ನೀಡುವುದಿಲ್ಲ’ ಎಂದು ಹೇಳಿತ್ತು. ಅವರ ಕಾರ್ಯ
ವೈಖರಿ ಮತ್ತು ಕೋರ್ಟ್ ಹಾಲ್ನಲ್ಲಿನ ಹಗುರ ಮಾತುಗಳಿಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು.
10 ಪ್ರಕರಣಗಳ ವಿಚಾರಣೆ: ಕೊನೆಯ ದಿನವಾದ ಸೋಮವಾರ ಮುಖರ್ಜಿ ಅವರು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರೊಂದಿಗೆ ವಿಭಾಗೀಯ ಪೀಠದಲ್ಲಿ ಕಲಾಪ ನಡೆಸಿದರು.
ಕಲಾಪ ಪಟ್ಟಿಯಲ್ಲಿ ನಿಗದಿಯಾಗಿದ್ದ 10 ಪ್ರಕರಣಗಳನ್ನು ನಲವತ್ತೈದು ನಿಮಿಷ ಕಾಲ ವಿಚಾರಣೆ ನಡೆಸಿದರು. ಕಲಾಪ ಮುಗಿಯುತ್ತಿದ್ದಂತೆ ಕೋರ್ಟ್ ಹಾಲ್ನಲ್ಲಿ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ‘ನಿವೃತ್ತಿಯ ಜೀವನ ಸುಖಕರವಾಗಿರಲಿ’ ಎಂದು ಅವರಿಗೆ ಶುಭಾಶಯ ಕೋರಿದರು.
ಮೂಲತಃ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಮುಖರ್ಜಿ, 2015ರ ಏಪ್ರಿಲ್ 15ರಂದು ರಾಜ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿ ವರ್ಗವಾಗಿದ್ದರು. 2016ರ ಫೆ.23ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು.ಹೈಕೋರ್ಟ್ನ ಸದ್ಯದ ನ್ಯಾಯಮೂರ್ತಿಗಳ ಸಂಖ್ಯೆ 25. ಮಂಜೂರು ಸಂಖ್ಯೆ 62.