ಬೆಂಗಳೂರು: ಲವ್ನಿತ್ ಸಿಸೋಡಿಯಾ (80) ಹಾಗೂ ನಿಕಿನ್ ಜೋಸ್ (59) ಅವರ ಅರ್ಧಶತಕದ ಆಟದ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡ 19 ವರ್ಷದೊಳಗಿನವರ ವಿನೂ ಮಂಕದ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ 7 ವಿಕೆಟ್ಗಳ ಜಯಭೇರಿ ದಾಖಲಿಸಿದೆ. ಕರ್ನಾಟಕ ತಂಡಕ್ಕೆ ಈ ಟೂರ್ನಿಯಲ್ಲಿ ಸಿಕ್ಕ ಸತತ ಎರಡನೇ ಗೆಲುವು ಇದಾಗಿದೆ.
ಮೊದಲು ಬ್ಯಾಟ್ ಮಾಡಿದ ಆಂಧ್ರ ತಂಡ 48.4 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ 39.5 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಾಜ್ಯ ತಂಡ ನಿಕಿನ್ ಜೋಸ್ 59 ರನ್ ದಾಖಲಿಸಿ ಅಜೇಯರಾಗಿ ಉಳಿದರು.
ಆರಂಭಿಕ ಬ್ಯಾಟ್ಸ್ಮನ್ ಲವ್ನಿತ್ 80ರನ್ಗಳಿಂದ ತಂಡದ ಬ್ಯಾಟಿಂಗ್ ಶಕ್ತಿಗೆ ಬಲ ತುಂಬಿದರು. ಗೌತಮ್ ಸಾಗರ್ ಅಜೇಯರಾಗಿ 22 ರನ್ ಸೇರಿಸಿದರು. ಆಂಧ್ರ ತಂಡದ ಬ್ಯಾಟಿಂಗ್ ಪಡೆಯನ್ನು ಉರುಳಿಸುವಲ್ಲಿ ಮನೋಜ್ ಭಂಡಾಜೆ ಪ್ರಮುಖ ಪಾತ್ರ ನಿರ್ವಹಿಸಿದರು.
ಕರ್ನಾಟಕ ತಂಡದ ಬೌಲರ್ 32 ರನ್ಗಳನ್ನು ನೀಡಿ 3 ವಿಕೆಟ್ ಕಬಳಿಸಿದರು. ಬಿ.ಎಮ್. ಶ್ರೇಯಸ್ ಹಾಗೂ ರುಚಿರ್ ಜೋಷಿ ಹಾಗೂ ಅಮನ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿದರು. ಆಂಧ್ರ ತಂಡದ ಬ್ಯಾಟ್ಸ್ಮನ್ ಪೃಥ್ವಿ ರಾಜ್ 55 ರನ್ ಪೇರಿಸಿ ತಂಡ ಗೌರವದ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಸಂಕ್ಷಿಪ್ತ ಸ್ಕೋರು: ಆಂಧ್ರ ಸಂಸ್ಥೆ: 48.4 ಓವರ್ಗಳಲ್ಲಿ 183 (ಸಂದೀಪ್ 29, ಕೆ.ಎನ್ ಪೃಥ್ವಿರಾಜ್ 55; ರುಚಿರ್ ಜೋಷಿ 40ಕ್ಕೆ2, ಮನೋಜ್ ಭಂಡಾಜೆ 32ಕ್ಕೆ3, ಅಮನ್ ಖಾನ್ 41ಕ್ಕೆ2, ಬಿ.ಎ.ಮ್ ಶ್ರೇಯಸ್ 42ಕ್ಕೆ2).
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ: 39.5 ಓವರ್ಗಳಲ್ಲಿ 3 ವಿಕೆಟ್ಗೆ 185 (ಎಸ್.ಜೆ ನಿಕಿನ್ ಜೋಸ್ ಅಜೇಯ 59, ಲವ್ನಿತ್ ಸಿಸೋಡಿಯಾ 80, ಗೌತಮ್ ಸಾಗರ್ ಅಜೇಯ 22). ಫಲಿತಾಂಶ: ಕೆಎಸ್ಸಿಎಗೆ 7 ವಿಕೆಟ್ಗಳ ಗೆಲುವು.