ಬೆಂಗಳೂರು: ಮೋಡ ಬಿತ್ತನೆಯಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಶೇ 10ರಿಂದ 20ರಷ್ಟು ಹೆಚ್ಚಳವಾಗಿದೆ ಎಂದು ಅಮೆರಿಕದ ಹವಾಮಾನ ಮಾರ್ಪಾಡು ಅಂತರ ರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ನೀಲ್ ಬ್ರಾಕಿನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ಮೋಡ ಬಿತ್ತನೆ ಮತ್ತು ಅದರಿಂದ ಸುರಿದ ಮಳೆ ಮಾಹಿತಿಯನ್ನು ವಿಶ್ಲೇಷಿಸಿರುವ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸೋಮವಾರ ವೈಜ್ಞಾನಿಕ ಮಾಹಿತಿ ನೀಡಿದರು.
ಮೋಡ ಬಿತ್ತನೆ ಆರಂಭವಾದಾಗ ಶೇ 57ರಷ್ಟು ಮಳೆಯ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸಿರುವ ಸಮಾಧಾನ ಮತ್ತು ಸಂತಸ ರಾಜ್ಯದ ಜನತೆಯಲ್ಲಿದೆ. ಸರ್ಕಾರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 6,000 ಮಳೆ ಮಾಪಕಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಮೋಡ ಬಿತ್ತನೆಗೆ ಮೊದಲ ಎರಡು ತಾಸು ಮತ್ತು ಮೋಡ ಬಿತ್ತನೆಯ ನಂತರ ಎರಡು ತಾಸು ಮಳೆ ಪ್ರಮಾಣ ಅಳತೆ ಮಾಡಲಾಗಿದೆ. ಅಲ್ಲದೆ, ರೇಡಾರ್ ಮೂಲಕ ಅಂಕಿ– ಅಂಶಗಳನ್ನು ಸಂಗ್ರಹಿಸಲಾಗಿದೆ ಎಂದರು.
ಕರ್ನಾಟಕ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಎಚ್.ಪಿ. ಪ್ರಕಾಶ್ ಮತ್ತು ಮುಖ್ಯ ಎಂಜಿನಿಯರ್ ಪ್ರಕಾಶ್ ಕುಮಾರ್ ಇದ್ದರು.