ಕೆಜಿಎಫ್: ‘ನಗರದಿಂದ ಬೆಂಗಳೂರಿಗೆ ಹೋಗಿ ಬರುವ ‘ಸ್ವರ್ಣ’ ರೈಲು ಸಂಚಾರವನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು. ನಗರದ ಅಶೋಕನಗರದಲ್ಲಿ ಸೋಮವಾರ ಮನೆ ಮನೆಗೆ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅತಿ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸ್ವರ್ಣ ರೈಲು ಸಂಚಾರ ಬದಲಾಯಿಸಿ, ಅದರ ಬದಲು 12 ಬೋಗಿಗಳ ಮೇಮೊ ರೈಲನ್ನು ಓಡಿಸಲಾಗುತ್ತದೆ.
ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ವರ್ಣ ರೈಲು ಎಂದಿನಂತೆ ಇರಲಿದೆ. 12 ಬೋಗಿಗಳ ಮತ್ತೊಂದು ರೈಲನ್ನು ಬಿಡಲು ರೈಲ್ವೆ ಇಲಾಖೆ ಸಿದ್ಧವಾಗಿದೆ. ಅದಕ್ಕೆ ಸಮಯವನ್ನು ನಿಗದಿ ಮಾಡಲು ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ನಾಲ್ಕೂವರೆ ವರ್ಷಗಳಲ್ಲಿ ಹಿಂದೆ ಯಾವುದೇ ಸರ್ಕಾರಗಳು ಮಾಡದ ಕೆಲಸಗಳನ್ನು ಪೂರೈಸಿ, ಸಾಧನೆ ಮಾಡಿದೆ. ರಾಜ್ಯದ ಆರು ಕೋಟಿ ಜನರ ಪೈಕಿ ನಾಲ್ಕೂವರೆ ಕೋಟಿ ಜನ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನ ಪಡೆದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಅದರ ಜನಸಂಖ್ಯೆಗೆ ಅನುಗುಣವಾಗಿ ಆರ್ಥಿಕ ನೆರವು ನೀಡಲಾಗಿದೆ. ಜಿಲ್ಲೆಯಲ್ಲಿ 29 ವಸತಿ ನಿಲಯ ವಿದ್ಯಾರ್ಥಿಗಳಿಗಾಗಿ ತೆರೆಯಲಾಗಿದೆ’ ಎಂದು ಅವರು ತಿಳಿಸಿದರು.
‘ರಾಜ್ಯ ಸರ್ಕಾರದ ಸಾಧನೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಮುಂದಿನ ಅವಧಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಶೀರ್ವಾದ ಕೇಳಬೇಕು’ ಎಂದು ಮುನಿಯಪ್ಪ ಹೇಳಿದರು.
ನಗರಸಭೆ ಅಧ್ಯಕ್ಷ ರಮೇಶ್ಕುಮಾರ್, ಕೆಡಿಎ ಅಧ್ಯಕ್ಷೆ ಕೆ.ವಿ.ಕುಮಾರಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕಿ ರೂಪಾ ಶಶಿಧರ್, ಉಪಾಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷ ಲಾರೆನ್ಸ್, ಮುಖಂಡರಾದ ಕೆ.ಚಂದ್ರಾರೆಡ್ಡಿ, ಮಾಣಿಕ್ಯಂ, ಆನಂದಕೃಷ್ಣನ್, ಸೀನಿ, ಫ್ರಾನ್ಸಿಸ್ ಇದ್ದರು.