ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೂ ಅನ್ನಭಾಗ್ಯ!

Last Updated 11 ಅಕ್ಟೋಬರ್ 2017, 9:38 IST
ಅಕ್ಷರ ಗಾತ್ರ

ನವದೆಹಲಿ: ವಿಧಾನ ಮಂಡಲದ ಅಧಿವೇಶನದ ಸಂದರ್ಭ ಶಾಸಕರು ಉಭಯ ಸದನಗಳ ಕಲಾಪದಲ್ಲಿ ಭಾಗವಹಿಸುವಂತೆ ಆಕರ್ಷಿಸುವ ನಿಟ್ಟಿನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಧಾನಸಭೆಯ ಸ್ಪೀಕರ್‌ ಕೆ.ಬಿ. ಕೋಳಿವಾಡ ತಿಳಿಸಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ನಡೆದಾಗ ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸದೆ ಗೈರಾಗುತ್ತಿದ್ದಾರೆ. ಅದನ್ನು ತಡೆಯುವುದಕ್ಕೇ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮಧ್ಯಾಹ್ನ ಊಟಕ್ಕಾಗಿ ಶಾಸಕರ ಭವನದತ್ತ ಅಥವಾ ಹೋಟೆಲ್‌ಗಳತ್ತ ತೆರಳುವ ಶಾಸಕರು ನಂತರ ನಡೆಯುವ ಕಲಾಪದಲ್ಲಿ ಪಾಲ್ಗೊಳ್ಳದಿರುವುದು ಗಮನಕ್ಕೆ ಬಂದಿದೆ. ಅವರಿಗೆ ವಿಧಾನಸೌಧದಲ್ಲೇ ಉಚಿತವಾಗಿ, ಪೌಷ್ಟಿಕಾಂಶ ಇರುವ ಉತ್ತಮ ಊಟ ನೀಡಬೇಕು ಎಂಬ ಚಿಂತನೆ ನಡೆದಿದೆ ಎಂದು ಹೇಳಿದರು.

ಶಾಸಕರು ರಾತ್ರಿ ವೇಳೆ ಹೋಟೆಲ್‌, ಪಬ್‌ ಮತ್ತಿತರ ಕಡೆ ಊಟಕ್ಕೆ, ‘ಪಾರ್ಟಿ’ ಮಾಡಲು ಹೋಗುವುದನ್ನು ತಡೆಯಲು ‘ಕಾನ್ಸ್‌ಟಿಟ್ಯೂಷನ್‌ ಕ್ಲಬ್‌’ ಮಾದರಿಯ ಕ್ಲಬ್‌ ನಿರ್ಮಿಸಲಾಗುವುದು. ಮುಖ್ಯಮಂತ್ರಿಯವರ ನಿವಾಸ ‘ಅನುಗ್ರಹ’ದ ಸಮೀಪ ಇರುವ 2.20 ಎಕರೆ ಜಮೀನಿನಲ್ಲಿ ಈ ಕಟ್ಟಡ ತಲೆ ಎತ್ತಲಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಜನಪ್ರತಿನಿಧಿಗಳು ರಾತ್ರಿ ವೇಳೆ ಊಟಕ್ಕಾಗಿ ಎಲ್ಲೆಂದರಲ್ಲಿ ತೆರಳುವುದು ಅವರ ಗೌರವಕ್ಕೆ ಧಕ್ಕೆ ತರುವಂಥದ್ದಾಗಿದೆ. ಇದನ್ನು ಗಮನಿಸಿ, ಶಾಸಕರ ಖಾಸಗಿತನ ಕಾಪಾಡುವುದಕ್ಕಾಗಿ ಈ ಕ್ಲಬ್‌ ನಿರ್ಮಿಸಲಾಗುತ್ತದೆ. ಜಿಮ್‌, ಈಜುಗೊಳ, ಬ್ಯಾಡ್ಮಿಂಟನ್‌ ಕೋರ್ಟ್‌, ಹೋಟೆಲ್‌, ಸಭಾಂಗಣ ಸೌಲಭ್ಯವನ್ನು ಈ ಕ್ಲಬ್‌ ಒಳಗೊಳ್ಳಲಿದೆ ಎಂದು ಅವರು ತಿಳಿಸಿದರು.

ವಿಧಾನಸೌಧ ವಜ್ರಮಹೋತ್ಸವ
ವಿಧಾನಸೌಧದ ವಜ್ರಮಹೋತ್ಸವ ಸಮಾರಂಭದ ಅಂಗವಾಗಿ ಇದೇ 25ರಿಂದ ಎರಡು ದಿನ ಜಂಟಿ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗವಹಿಸಲಿದ್ದು, ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಕೋಳಿವಾಡ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT