ಬೆಂಗಳೂರು: ‘ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ 34,574 ದೇವಾಲಯಗಳಲ್ಲಿ ಕನ್ನಡದಲ್ಲಿಯೇ ಅರ್ಚನೆ ನಡೆಸಬೇಕು’ ಎಂದು ನಾಡು, ನುಡಿ, ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವಾಲಯಗಳಿಗೆ ಅರ್ಚಕರನ್ನು ನೇಮಿಸುವ ಉದ್ದೇಶದಿಂದ ಧಾರ್ಮಿಕ ಪರಿಷತ್ತು ಸಂಸ್ಕೃತ ವೇದ ಪಾಠಶಾಲೆಗಳನ್ನು ತೆರೆಯಲು ತೀರ್ಮಾನಿಸಿದೆ. ಜನರಿಗೆ ಅರ್ಥವಾಗದ ಸಂಸ್ಕೃತ ಭಾಷೆಯಲ್ಲಿ ಪೂಜೆ ಸಲ್ಲಿಸುವ ಅಗತ್ಯವಿಲ್ಲ. ಕನ್ನಡದಲ್ಲಿ ಮಂತ್ರಗಳನ್ನು ಕಲಿಸುವ ಶಾಲೆಗಳನ್ನು ಪ್ರಾರಂಭಿಸಬೇಕು’ ಎಂದು ಆಗ್ರಹಿಸಿದರು.
‘ಚರ್ಚ್ಗಳು ಹಾಗೂ ಮದರಸಾಗಳಲ್ಲೂ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸರ್ಕಾರ ನಿರ್ದೇಶಿಸಬೇಕು’ ಎಂದರು. ‘ತಮಿಳುನಾಡಿನ ಎಲ್ಲ ದೇವಾಲಯಗಳಲ್ಲಿ ತಮಿಳಿನಲ್ಲಿಯೇ ಮಂತ್ರಗಳನ್ನು ಪಠಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಹಿಂದುಳಿದ ವರ್ಗ ಮತ್ತು ದಲಿತರಿಗೆ ಸಂಸ್ಕೃತ ಮಂತ್ರಗಳನ್ನು ಬೋಧಿಸಲು ಇಲಾಖೆ ಮುಂದಾಗಿದೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿಯ ಅರಿವಿಲ್ಲದವರು ಮಾತ್ರ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಇದರಿಂದ ದಲಿತ ಸಂಸ್ಕೃತಿಗೆ ಧಕ್ಕೆಯಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ವ್ಯವಸ್ಥಿತವಾಗಿ ಹಿಂದಿ ಹೇರಿಕೆ ನಡೆಯುತ್ತಿದೆ. ಈ ಮೊದಲು ಇಂಗ್ಲಿಷ್ನಲ್ಲಿ ಬರುತ್ತಿದ್ದ ಮೊಬೈಲ್ ಸಂದೇಶಗಳು ಈಗ ಹಿಂದಿಯಲ್ಲಿ ಬರುತ್ತಿವೆ. ಇದರ ವಿರುದ್ಧ ಜನಾಂದೋಲನ ರೂಪಿಸುವ ಅಗತ್ಯವಿದೆ