ಕುರುಗೋಡು: ‘ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಬಾದನಹಟ್ಟಿ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಸಾಲು ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ’ ಎಂದು ನಿವಾಸಿಗಳಾದ ಶಾಮಿಯಾನ ಮೌಲಾಲಿ, ದಾನಯ್ಯ ಸ್ವಾಮಿ ಮತ್ತು ಜಯಲಕ್ಷ್ಮಿ ದೂರಿದ್ದಾರೆ.
‘ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ವಿವಿಧ ಖಾಸಗಿ ಶಾಲಾ ಕಾಲೇಜುಗಳು ಇದೇ ರಸ್ತೆಯಲ್ಲಿದ್ದು, ವಿದ್ಯಾರ್ಥಿಗಳು ನಡೆಯುವುದೂ ಕಷ್ಟಕರವಾಗಿದೆ. ರಾತ್ರಿವೇಳೆ ಕತ್ತಲಲ್ಲಿ ದ್ವಿಚಕ್ರವಾಹನ ಸವಾರರು ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ’ ಎಂದಿದ್ದಾರೆ.
‘ಗುಂಡಿಗಳಲ್ಲಿ ಕಲುಷಿತ ನೀರು ಸಂಗ್ರಹವಾಗಿದ್ದು, ಸುತ್ತಮುತ್ತ ವಾಸಿಸುವ ಜನರಿಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಕಡಿತದಿಂದ ಬರುವ ಡೆಂಗಿ, ಮಲೇರಿಯಾ ಮತ್ತು ಚಿಕೂನ್ ಗುನ್ಯ ರೋಗದ ಭೀತಿಯೂ ಮೂಡಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ರಸ್ತೆ ದುರಸ್ತಿ ವಿಚಾರದಲ್ಲಿ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಸ್ಪರರ ಕಡೆಗೆ ಕೈತೋರಿಸಿ ನುಣುಚಿಕೊಳ್ಳುತ್ತಿದ್ದಾರೆ’ ಎಂದು ದೂರಿದ್ದಾರೆ.