ಬಳ್ಳಾರಿ: ನಗರದ ಈದ್ಗಾ ಮೈದಾನದ ಬದಿಯ ಬೀಡಿ ಕಾರ್ಮಿಕರ ಕಟ್ಟಡದ ಬಳಿ ಹಳೇ ಬೈಪಾಸ್ ರಸ್ತೆ ಸೋಮವಾರ ಬೆಳಗ್ಗೆ 8.30ರ ವೇಳೆಯಲ್ಲಿ ದಿಢೀರನೆ ಹಲವು ಅಡಿಗಳ ಆಳಕ್ಕೆ ಕುಸಿದು ಜನರಲ್ಲಿ ಆತಂಕ ಮೂಡಿಸಿತ್ತು.
‘ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲಿ ಇತ್ತೀಚೆಗಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಕುಡಿಯುವ ನೀರಿನ ಪೈಪ್ಗೆ ಹಾನಿಯಾಗಿದ್ದು ಅದನ್ನು ತೆರವು ಮಾಡಿ ಹೊಸದನ್ನು ಅಳವಡಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ತಿಳಿಸಿದರು.
ಬೆಂಗಳೂರು –ಹೊಸಪೇಟೆ ರಸ್ತೆ ನಡುವೆ ಸಂಪರ್ಕ ಕಲ್ಪಿಸಲು ಈ ಬೈಪಾಸ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ಮಿಸಿತ್ತು. ಸ್ಥಳಕ್ಕೆ ಮೇಯರ್ ಜಿ.ವೆಂಕಟರಮಣ ಭೇಟಿ ನೀಡಿದ್ದರು. ಸ್ಥಳದಲ್ಲಿ ಬ್ಯಾರಿಕೇಡ್ ನಿಲ್ಲಿಸಿದ್ದು, ದುರಸ್ತಿ ನಡೆಯಬೇಕಾಗಿದೆ.