ಚನ್ನಗಿರಿ: 15 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೆರೆಗೆ ಭದ್ರಾ ಕಾಲುವೆಯಿಂದ ಎಂಟು ಅಡಿ ನೀರನ್ನು ಹರಿಸಲಾಗಿದೆ. ಜನವರಿ ತಿಂಗಳಲ್ಲಿ ಮತ್ತೆ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲಾಗುವುದು ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು. ಚನ್ನಗಿರಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ ಬಳಿ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಈ ವರ್ಷ ಭೀಕರ ಬರಗಾಲದಿಂದ ಸೂಳೆಕೆರೆ ಸಂಪೂರ್ಣ ಖಾಲಿಯಾಗಿ ಪಟ್ಟಣದ ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಯಿತು. ಕುಡಿಯುವ ನೀರಿಗೆ ತೊಂದರೆಯಾದರೂ ಪಟ್ಟಣದ ಜನರು ನಮಗೆ ಉತ್ತಮ ಸಹಕಾರ ನೀಡಿದ್ದರು. 60 ಕೊಳವೆಬಾವಿಗಳಿಂದ ಲಭ್ಯವಿದ್ದ ನೀರನ್ನು ಬೇಸಿಗೆಯಲ್ಲಿ ಸರಬರಾಜು ಮಾಡಿ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಪುರಸಭೆಯವರು ಮಾಡಿದ್ದರು.
ಸೂಳೆಕೆರೆಗೆ ಜನವರಿ ತಿಂಗಳಲ್ಲಿ ಭದ್ರಾ ಕಾಲುವೆಯ ನೀರನ್ನು ಹರಿಸಿ ತುಂಬಿಸುವುದರಿಂದ ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾಗುವುದಿಲ್ಲ. ಹಿರೇಹಳ್ಳದಿಂದ ಕೂಡ ನಾಲ್ಕೈದು ಅಡಿ ನೀರು ಕೆರೆಗೆ ಹರಿದುಬಂದಿದೆ. ಬುಧವಾರದಿಂದ ಪಟ್ಟಣಕ್ಕೆ ಮತ್ತೆ ಕುಡಿಯುವ ನೀರು ಪೂರೈಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಬಿ.ಆರ್.ಹಾಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ.ರವಿಕುಮಾರ್, ಸದಸ್ಯರಾದ ಅಸ್ಲಾಂ ಬೇಗ್, ರುದ್ರಯ್ಯ, ಶಿವಕುಮಾರ್, ಶಿವರತ್ನಮ್ಮ, ಶಿವರುದ್ರಪ್ಪ ಇದ್ದರು.