ಹೊಳೆನರಸೀಪುರ: ಪಟ್ಟಣದ ಕಸಾಯಿ ಖಾನೆಗಳಿಗೆ ಸಾಗಿಸುತ್ತಿದ್ದ ರಾಸುಗಳನ್ನು ಪೊಲೀಸರು ವಶಪಡಿಸಿಕೊಂಡು, ಮೈಸೂರಿನ ಪಿಂಜರಾಪೋಲ್ಗೆ ಕಳುಹಿಸಿದ್ದಾರೆ. ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಮೋಹನ್ಕೃಷ್ಣ ಅವರು ರಿವರ್ ಬ್ಯಾಂಕ್ ರಸ್ತೆಯಲ್ಲಿ ಹೊಡೆದುಕೊಂಡು ಹೋಗುತ್ತಿದ್ದ ರಾಸುಗಳ ಹಿಂಡನ್ನು ಕಂಡು ಪ್ರಶ್ನಿಸುತ್ತಿದ್ದಂತೆ ಮೂವರು ಪರಾರಿಯಾದರು.
12 ಎಮ್ಮೆ,10 ಹಸು, 3 ಕರುಗಳನ್ನು ವಶಪಡಿಸಿಕೊಂಡು ಮಂಗಳವಾರ ಮಧ್ಯಾಹ್ನದ ವೇಳೆಗೆ ಮೈಸೂರಿನ ಪಿಂಜರಾ ಪೋಲ್ಗೆ ಲಾರಿಯಲ್ಲಿ ಕಳುಹಿಸಿದರು.ಕೃಷಿ ಭಾಗ್ಯ ಯೋಜನೆ ಅನುಷ್ಠಾನ
ಹೊಳೆನರಸೀಪುರ: ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಲು ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಪಾಲಿಹೌಸ್ ಘಟಕ, ನೆರಳು ಪರದೆ ಮತ್ತು ಕೃಷಿ ಹೊಂಡ ಘಟಕಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90 ರಷ್ಟು ಮತ್ತು ಸಾಮಾನ್ಯ ರೈತರಿಗೆ ಶೇ 50 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತ ರೈತ ಫಲಾನುಭವಿಗಳು ಪಹಣಿ, ಆಧಾರ್ ಕಾರ್ಡ್, ಹಿಡುವಳಿ ಪ್ರಮಾಣ ಪತ್ರ, ನೀರಿನ ಅನುಕೂಲತೆ ವಿವರಗಳ ದಾಖಲೆ ಗಳೊಂದಿಗೆ ಅ. 24ರೊಳಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.